ADVERTISEMENT

‘ರಾಮಲಲ್ಲಾ ದರ್ಶನ ಭಾಗ್ಯ ಸಿಕ್ಕಿತು’

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 22:48 IST
Last Updated 5 ಆಗಸ್ಟ್ 2020, 22:48 IST
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರು ಉತ್ತರ‍ಪ್ರದೇಶದ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿಯ ದರ್ಶನ ಪಡೆದರು
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರು ಉತ್ತರ‍ಪ್ರದೇಶದ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿಯ ದರ್ಶನ ಪಡೆದರು   

ಚಿತ್ರದುರ್ಗ: ‘ವಿವಾದದ ಕೇಂದ್ರ ಬಿಂದುವಾಗಿ ಪಂಜರದೊಳಗೆ ಸಿಲುಕಿದ್ದ ರಾಮದೇಗುಲದ ರಾಮಲಲ್ಲಾ ಮೂರ್ತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಅಯೋಧ್ಯೆಯ ಮೊದಲ ಭೇಟಿಯಲ್ಲೇ ರಾಮಲಲ್ಲಾ ದರ್ಶನ ಭಾಗ್ಯ ಸಿಕ್ಕಿದ್ದು ಧನ್ಯತೆ ಮೂಡಿಸಿದೆ...’

ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಪಾಲ್ಗೊಂಡ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಂಭ್ರಮವನ್ನು ಹಂಚಿಕೊಂಡ ಬಗೆ ಇದು. ಆಯ್ದ 175 ಗಣ್ಯರಲ್ಲಿ ಕರ್ನಾಟಕದ ಮಠಾಧೀಶರ ಪೈಕಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಮಾತ್ರ ಪಾಲ್ಗೊಂಡಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾಗೆ ಭೇಟಿ ನೀಡಿ ದರ್ಶನ ಭಾಗ್ಯ ಕಲ್ಪಿಸಿದರು. ಸಾಧು–ಸಂತರೊಂದಿಗೆ ರಾಮನ ದರ್ಶನ ಪಡೆದು ಪುಳಕಿತನಾದೆ. ರಾಮಲಲ್ಲಾ ಸಣ್ಣದೊಂದು ಮೂರ್ತಿಯಂತೆ ಕಾಣಬಹುದು. ಆದರೆ, ಅದರ ಮಹತ್ವ ಇಲ್ಲಿಯ ಭಕ್ತರಿಗೆ ಮಾತ್ರ ಗೊತ್ತಾಗುವುದು’ ಎಂದು ಹೇಳಿದರು.

ADVERTISEMENT

‘ರಾಮಮಂದಿರದ ಭೂಮಿಪೂಜೆಗೆ ಇಡೀ ಅಯೋಧ್ಯೆ ವೈಭವೋಪೇತವಾಗಿ ಸಿಂಗಾರಗೊಂಡಿತ್ತು. ಪ್ರತಿ ಬೀದಿಯಲ್ಲಿ ಸಂಭ್ರಮ ಮೇಳೈಸಿತ್ತು. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹಲವರು ಕಾತರದಿಂದ ಕಾಯುತ್ತಿದ್ದರು. ಅರೆ ಸೇನಾ ಪಡೆಯ ಯೋಧರು ಹಾಗೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು’ ಎಂದರು.

‘ಕೊರೊನಾ ಸಂಕಷ್ಟ ಎದುರಾಗದಿದ್ದರೆ ಈ ಸಂಭ್ರಮದಲ್ಲಿ ಇಡೀ ದೇಶ ಪಾಲ್ಗೊಳ್ಳುತ್ತಿತ್ತು. ಮೂರು ವರ್ಷಗಳ ಬಳಿಕ ನಡೆಯವ ಲೋಕಾರ್ಪಣೆ ಸಮಾರಂಭಕ್ಕೆ ಕೋಟ್ಯಂತರ ಭಕ್ತರು ಸಾಕ್ಷಿಯಾಗುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.