ADVERTISEMENT

ಸಿಬಿಐಗೆ ಎಂ.ನಾಗೇಶ್ವರ ರಾವ್‌ ನೇಮಕ ಅಕ್ರಮ: ಮಲ್ಲಿಕಾರ್ಜುನ ಖರ್ಗೆ ಆರೋಪ

ತಕ್ಷಣ ಆಯ್ಕೆ ಸಮಿತಿ ಸಭೆ ಕರೆ ಪ್ರಧಾನಿಗೆ ಪತ್ರ ಬರೆದ ಖರ್ಗೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 19:07 IST
Last Updated 15 ಜನವರಿ 2019, 19:07 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಸಿಬಿಐಗೆ ಎಂ.ನಾಗೇಶ್ವರ ರಾವ್‌ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಅಕ್ರಮ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸಿಬಿಐಗೆ ಹೊಸ ನಿರ್ದೇಶಕರನ್ನು ನೇಮಕ ಮಾಡಲು ತಕ್ಷಣ ಆಯ್ಕೆ ಸಮಿತಿ ಸಭೆ ಕರೆಯುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ನೇತೃತ್ವದ ಮೂವರು ಸದಸ್ಯರ ಸಮಿತಿಯು ಇತ್ತೀಚೆಗೆ ಅಲೋಕ್‌ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವರ್ಗಾವಣೆ ಮಾಡಿತ್ತು. ಈ ಸಮಿತಿಯ ಸದಸ್ಯರಾಗಿದ್ದ ಖರ್ಗೆ ಅವರು ಅಲೋಕ್‌ ವರ್ಮಾ ವರ್ಗಾವಣೆ ಕ್ರಮವನ್ನು ಬಲವಾಗಿ ವಿರೋಧಿಸಿದ್ದರು.

ADVERTISEMENT

‘ಸಿಬಿಐನಂತಹ ಸ್ವಾಯತ್ತ ಸಂಸ್ಥೆಗೆ ಸ್ವತಂತ್ರ ಮನೋಭಾವದ ನಿರ್ದೇಶಕರು ನೇಮಕವಾಗುವುದು ಸರ್ಕಾರಕ್ಕೆ ಬೇಕಾಗಿಲ್ಲ. ಸ್ವತಂತ್ರ ಮನೋಭಾವದ ಅಧಿಕಾರಿಗಳಿಗೆ ಸರ್ಕಾರ ಹೆದರುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ಸಿಬಿಐ ನಿರ್ದೇಶಕರಾಗಿದ್ದ ಅಲೋಕ್‌ ವರ್ಮಾ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡು ರೀತಿ ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಖರ್ಗೆ ಹೇಳಿದ್ದಾರೆ.

ಎಂ.ಎನ್‌. ನಾಗೇಶ್ವರ ರಾವ್‌ ಅವರನ್ನು ಸಿಬಿಐ ಮಧ್ಯಂತರ ನಿರ್ದೇಶಕರನ್ನಾಗಿ ನೇಮಕ ಮಾಡುವ ನಿರ್ಧಾರ ಜ.10ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.

ವರದಿ ಬಹಿರಂಗಕ್ಕೆ ಒತ್ತಡ

*ಸಿಬಿಐ ಮಾಜಿ ನಿರ್ದೇಶಕ ಅಲೋಕ್‌ ವರ್ಮಾ ಅವರಿಗೆ ಸಂಬಂಧಿಸಿದಂತೆ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಮತ್ತು ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌ ಸಲ್ಲಿಸಿದ ವರದಿಗಳನ್ನು ತಕ್ಷಣ ಬಹಿರಂಗಗೊಳಿಸಬೇಕು

*ಅಲೋಕ್‌ ವರ್ಮಾ ಭವಿಷ್ಯ ನಿರ್ಧರಿಸಲು ಜ.10ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಮೂವರು ಸದಸ್ಯರ ಸಮಿತಿ ಸಭೆಯ ನಡಾವಳಿಗಳನ್ನು ಬಹಿರಂಗಪಡಿಸಬೇಕು

*ಅಲೋಕ್‌ ವರ್ಮಾ ವಿರುದ್ಧ ಭ್ರಷ್ಟಾಚಾರ ಆರೋಪ ನಿರಾಧಾರ ಎಂದು ಕೇಂದ್ರ ಜಾಗೃತ ಆಯೋಗದ ವರದಿ ಹೇಳಿದೆ

*ಸಿಬಿಐ ಅಧಿಕಾರಿಗಳ ಸಂಘರ್ಷಕ್ಕೆ ಸಂಬಂಧಿಸಿದಂತೆ ಸರ್ಕಾರ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.