ADVERTISEMENT

ಮಂಗಳೂರು –ಬೆಂಗಳೂರು ಮಾರ್ಗ: ಇನ್ನೂ ಮೂರು ದಿನ ರೈಲು ಸಂಚಾರ ಇಲ್ಲ

ಬಂಡೆ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 7:22 IST
Last Updated 23 ಜುಲೈ 2019, 7:22 IST
ಸುಬ್ರಹ್ಮಣ್ಯ– ಸಕಲೇಶಪುರ ನಡುವಿನ ಶಿರಿಬಾಗಿಲು ಬಳಿ ರೈಲ್ವೆ ಹಳಿ ಮೇಲೆ ಉರುಳುವ ಸ್ಥಿತಿಯಲ್ಲಿದ್ದ ಬಂಡೆ ತೆರವು ಕಾರ್ಯಾಚರಣೆ.
ಸುಬ್ರಹ್ಮಣ್ಯ– ಸಕಲೇಶಪುರ ನಡುವಿನ ಶಿರಿಬಾಗಿಲು ಬಳಿ ರೈಲ್ವೆ ಹಳಿ ಮೇಲೆ ಉರುಳುವ ಸ್ಥಿತಿಯಲ್ಲಿದ್ದ ಬಂಡೆ ತೆರವು ಕಾರ್ಯಾಚರಣೆ.   

ಮಂಗಳೂರು: ಸುಬ್ರಹ್ಮಣ್ಯ– ಸಕಲೇಶಪುರ ನಡುವಿನ ಶಿರಿಬಾಗಿಲು ಬಳಿ ರೈಲ್ವೆ ಹಳಿ ಮೇಲೆ ಉರುಳುವ ಸ್ಥಿತಿಯಲ್ಲಿರುವ ಬಂಡೆ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಹಾಸನ– ಮಂಗಳೂರು ಮಾರ್ಗದಲ್ಲಿ ಇನ್ನೂ ಮೂರು ದಿನ ರೈಲು ಸಂಚಾರ ಇರುವುದಿಲ್ಲ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ಕಚೇರಿ ಪ್ರಕಟಣೆ ತಿಳಿಸಿದೆ.

ಸುರಂಗ ಮಾರ್ಗಕ್ಕೆ ಹೊಂದಿಕೊಂಡಂತೆ ಉರುಳಲು ಸಿದ್ಧವಾಗಿರುವ ಬೃಹದಾಕಾರದ ಬಂಡೆಯನ್ನು ಸ್ಫೋಟಿಸಿ, ಜೆಸಿಬಿ ಯಂತ್ರಗಳ ನೆರವಿನಿಂದ ತೆರವು ಮಾಡಲಾಗುತ್ತಿದೆ. ಕಾಮಗಾರಿ ಇನ್ನೂ ಮೂರು ದಿನ ನಡೆಯುವ ಸಾಧ್ಯತೆ ಇರುವುದರಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ಕೆಲವು ರೈಲುಗಳ ಸಂಚಾರ ರದ್ದುಗೊಳಿಸಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳವಾರ ಹೊರಡಬೇಕಿದ್ದ ಯಶವಂತಪುರ– ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌, ಮಂಗಳೂರು ಜಂಕ್ಷನ್‌– ಯಶವಂತಪುರ ಎಕ್ಸ್‌ಪ್ರೆಸ್‌, ಬುಧವಾರ ಸಂಚರಿಸಬೇಕಿದ್ದ ಮಂಗಳೂರು ಜಂಕ್ಷನ್‌– ಯಶವಂತಪುರ ಎಕ್ಸ್‌ಪ್ರೆಸ್‌, ಯಶವಂತಪುರ– ಕಾರವಾರ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌– ಎಕ್ಸ್‌ಪ್ರೆಸ್‌, ಗುರುವಾರ ಹೊರಡಬೇಕಿದ್ದ ಕಾರವಾರ– ಯಶವಂತಪುರ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ADVERTISEMENT

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣ ಬೆಂಗಳೂರು– ಕಾರವಾರ ಮತ್ತು ಕಾರವಾರ– ಕೆಎಸ್‌ಆರ್‌ ಬೆಂಗಳೂರು ನಡುವೆ ಮಂಗಳವಾರ, ಬುಧವಾರ ಮತ್ತು ಗುರುವಾರ ಸಂಚರಿಸಬೇಕಿದ್ದ ರೈಲುಗಳ ಸಂಚಾರವನ್ನು ಮಂಗಳೂರಿಗೆ ಸೀಮಿತಗೊಳಿಸಲಾಗಿದೆ. ಈ ರೈಲುಗಳು ಕಾರವಾರ– ಮಂಗಳೂರು ನಡುವೆ ಸಂಚರಿಸುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಮಾರ್ಗ ಬದಲಾವಣೆ: ಕೆಎಸ್‌ಆರ್‌ ಬೆಂಗಳೂರು– ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್‌ ರೈಲು ಮಂಗಳವಾರ ಮತ್ತು ಬುಧವಾರ ಮೈಸೂರು, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌ ಮಾರ್ಗದ ಬದಲಿಗೆ ಜೋಲಾರ್‌ಪೇಟ್‌, ಸೇಲಂ, ಪಾಲ್ಘಾಟ್‌, ಶೋರನೂರು ಮಾರ್ಗವಾಗಿ ಸಂಚರಿಸಲಿದೆ.

ಕಣ್ಣೂರು/ಕಾರವಾರ– ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಮಂಗಳವಾರ ಮತ್ತು ಬುಧವಾರ ಸುಬ್ರಹ್ಮಣ್ಯ ರೋಡ್‌, ಸಕಲೇಶಪುರ, ಹಾಸನ, ಶ್ರವಣಬೆಳಗೊಳ ಮಾರ್ಗದ ಬದಲಿಗೆ ಶೋರನೂರು, ಪಾಲ್ಘಾಟ್‌, ಸೇಲಂ, ಜೋಲಾರಪೇಟೆ ಮಾರ್ಗವಾಗಿ ಸಂಚರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.