ADVERTISEMENT

‘ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ’

ತೈಲ ಶುದ್ಧೀಕರಣ, ಪೆಟ್ರೋಕೆಮಿಕಲ್ ತಂತ್ರಜ್ಞಾನ ಕುರಿತಾದ ಜಾಗತಿಕ ಸಮ್ಮೇಳನದಲ್ಲಿ ಡಾ.ಎಂ.ಎಂ. ಕುಟ್ಟಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 21:16 IST
Last Updated 19 ಜನವರಿ 2020, 21:16 IST
ಬೆಂಗಳೂರಿನಲ್ಲಿ ಭಾನುವಾರ ಆರಂಭವಾದ 24ನೇ ತೈಲ ಶುದ್ಧೀಕರಣ, ಪೆಟ್ರೋಕೆಮಿಕಲ್ ತಂತ್ರಜ್ಞಾನ ಕುರಿತಾದ ಮೂರು ದಿನಗಳ ಜಾಗತಿಕ ಸಮ್ಮೇಳನಕ್ಕೆ ಚಾಲನೆ ನೀಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ಎಂ. ಕುಟ್ಟಿ (ಬಲದಿಂದ ಎರಡನೆಯವರು) ಎಂಆರ್‌ಪಿಎಲ್‌ನ ಕಾರ್ಯವೈಖರಿಯ ಪ್ರದರ್ಶನ ವೀಕ್ಷಿಸಿದರು.
ಬೆಂಗಳೂರಿನಲ್ಲಿ ಭಾನುವಾರ ಆರಂಭವಾದ 24ನೇ ತೈಲ ಶುದ್ಧೀಕರಣ, ಪೆಟ್ರೋಕೆಮಿಕಲ್ ತಂತ್ರಜ್ಞಾನ ಕುರಿತಾದ ಮೂರು ದಿನಗಳ ಜಾಗತಿಕ ಸಮ್ಮೇಳನಕ್ಕೆ ಚಾಲನೆ ನೀಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ಎಂ. ಕುಟ್ಟಿ (ಬಲದಿಂದ ಎರಡನೆಯವರು) ಎಂಆರ್‌ಪಿಎಲ್‌ನ ಕಾರ್ಯವೈಖರಿಯ ಪ್ರದರ್ಶನ ವೀಕ್ಷಿಸಿದರು.   

ಬೆಂಗಳೂರು: ಪರಿಸರ ಸಂರಕ್ಷಣೆ ಉದ್ದೇಶದಿಂದ ನಗರ ಪ್ರದೇಶ, ಕೈಗಾರಿಕೆಗಳಿಂದ ಉತ್ಪತ್ತಿಯಾಗುವತ್ಯಾಜ್ಯ, ಪ್ಲಾಸ್ಟಿಕ್‌ನಿಂದಇಂಧನ ಉತ್ಪಾದನೆ ಮಾಡುವ ತಂತ್ರಜ್ಞಾನ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದುಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ಎಂ.ಕುಟ್ಟಿ ಹೇಳಿದರು.

ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ (ಬಿಐಸಿಇ) ಭಾನುವಾರ ಎಂಆರ್‌ ಪಿಎಲ್‌ಸಹಯೋಗದಲ್ಲಿ ಆಯೋಜಿ
ಸಲಾಗಿರುವ 24ನೇ ‘ತೈಲ ಶುದ್ಧೀಕರಣ ಮತ್ತು ಪೆಟ್ರೊಕೆಮಿಕಲ್‌ ತಂತ್ರಜ್ಞಾನ’ ಕುರಿತ ಮೂರು ದಿನಗಳ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದದರು.

‘ಸಮೂಹ ಸಾರಿಗೆಯಲ್ಲಿ ಸಿಎನ್‌ಜಿ ಬಳಕೆ ಅಗತ್ಯ. ದೆಹಲಿಯಲ್ಲಿ ಜಾರಿಗೆ ತಂದಿರುವ ಈ ವ್ಯವಸ್ಥೆಯನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಅಗತ್ಯ ಇದೆ. ಇದಕ್ಕಾಗಿ ಸಿಎನ್‌ಜಿ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆಗಬೇಕು. ವಾಹನಗಳಿಂದ ಉಂಟಾಗುವ ಮಾಲಿನ್ಯಕಡಿಮೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಗಾಗಿ ಸಂಶೋಧನಾ ಚಟುವಟಿಕೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. 2018ರಲ್ಲಿ ದೆಹಲಿಯಲ್ಲಿ ಮಾಲಿನ್ಯ ಮಟ್ಟ ಕಡಿಮೆ ಮಾಡಲು ಆಧುನಿಕ ಬಿ.ಎಸ್. -6 ಪೆಟ್ರೋಲ್ ಮತ್ತು ಬಿ.ಎಸ್.-6 ಡೀಸೆಲ್ ಮಾರಾಟ ಮಾಡುತ್ತಿದ್ದು, ಇದನ್ನು ಇತರೆ ನಗರಗಳಿಗೆ ವಿಸ್ತರಿಸಲಾಗುತ್ತಿದೆ’ ಎಂದು ಡಾ.ಕುಟ್ಟಿ ಹೇಳಿದರು.

ADVERTISEMENT

ಖ್ಯಾತ ವಿಜ್ಞಾನಿ ಹಾಗೂ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಅನಿಲ್ ಕಾಕೋಡ್ಕರ್ ಮಾತನಾಡಿ, ದೇಶದ ಅರ್ಥ ವ್ಯವಸ್ಥೆ ಅನಿಲ ಆಧಾರಿತ ಇಂಧನ ಕ್ಷೇತ್ರದ ಮೇಲೆ ಅವಲಂಬಿತವಾಗಿದ್ದು, ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿ ಅಗಬೇಕು, ಕಲ್ಲಿದ್ದಲಿನಿಂದ ಇಂಧನ ಉತ್ಪಾದಿಸುವ ಕ್ಷೇತ್ರದ ಸಂಶೋಧನೆಯಿಂದ ಯಾವುದೇ ಪ್ರಯೋಜನವಿಲ್ಲ. ಪರಿಸರ ಸ್ನೇಹಿ ಇಂಧನ ಇಂದಿನ ಅಗತ್ಯ’ ಎಂದರು.

‘ಜಪಾನ್‌ನ ಫುಕುಶಿಮ ದುರಂತದ ನಂತರ ಅಲ್ಲಿ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲಾಗಿದೆ. ಇದು ಬೇರೆ ದೇಶಗಳಿಗೂ ಪಾಠ. ಬಯೋಮಾಸ್, ಜೈವಿಕ ಇಂಧನ ಉತ್ಪಾದನೆಯತ್ತ ಗಮನ ಹರಿಸಲು ಇದು ಸಕಾಲ. ಗ್ರಾಮೀಣ ವಲಯದಲ್ಲಿ ಬಯಾಮಾಸ್ ಬಳಕೆ ಹೆಚ್ಚಾಗಬೇಕು. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿನ ಬೆಳವಣಿಗೆಗಳು ಕಳವಳ ಕಾರಿಯಾಗಿದ್ದು, ಇಂಧನ ಭದ್ರತೆಗೆ ಸರ್ಕಾರ ಗಮನಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ಕೇಂದ್ರ ತೈಲ ಸಂಸ್ಕರಣೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, ಇಂಧನ ಉತ್ಪಾದನೆಯಲ್ಲಿ ಸ್ವಚ್ಛ, ಸುರಕ್ಷಿತ, ಸ್ಮಾರ್ಟ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಂಆರ್‌ಪಿಎಲ್‌ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ತೈಲ ಕ್ಷೇತ್ರ ಎದುರಿಸಿದ ಸವಾಲುಗಳ ಬಗ್ಗೆ ಮಾಹಿತಿ ನೀಡಿದರು.ಕಂಪನಿಯು ಬಿ.ಎಸ್. 6 ಗುಣಮಟ್ಟದ ಪೆಟ್ರೋಲ್, ಡೀಸೆಲ್ ಉತ್ಪಾದನೆಗೆ ಮುಂದಾಗಿರುವುದನ್ನು ತಿಳಿಸಿದರು.

ಶೇ 20ರಷ್ಟು ಜೈವಿಕ ಇಂಧನ ಮಿಶ್ರಣ
ಪೆಟ್ರೋಲ್ ಮತ್ತು ಡೀಸೆಲ್‌ ನಲ್ಲಿಜೈವಿಕ ಇಂಧನ ಮಿಶ್ರಣ ಮಾಡುತ್ತಿದ್ದು, 2030ರ ವೇಳೆಗೆ ಪೆಟ್ರೋಲ್‌ನಲ್ಲಿಶೇ 20ರಷ್ಟು, ಡೀಸೆಲ್‌ನಲ್ಲಿಶೇ 5ರಷ್ಟು ಜೈವಿಕ ಇಂಧನ ಮಿಶ್ರಣ ಮಾಡುವ ಗುರಿ ಇದೆ. ಎಥನಾಲ್ ಜತೆಗೆ ಗೃಹ ಬಳಕೆಗಾಗಿ ಬಯೋಗ್ಯಾಸ್ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಡಾ.ಕುಟ್ಟಿ ಹೇಳಿದರು.

*
ಎಲೆಕ್ಟ್ರಿಕ್ ವಾಹನ, ಹೊಸ ತಂತ್ರಜ್ಞಾನ ಬಂದರೂ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಯಾಗದು, 2040ರ ವೇಳೆಗೆ ಶೇ 35ರಿಂದ 31ಕ್ಕೆ ತಗ್ಗಬಹುದಷ್ಟೇ.
-ಡಾ.ಎಂ.ಎಂ. ಕುಟ್ಟಿ, ಕಾರ್ಯದರ್ಶಿ, ಕೇಂದ್ರ ಪೆಟ್ರೋಲಿಯಂ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.