ADVERTISEMENT

ಸೆಮಿಕಂಡಕ್ಟರ್‌ ಘಟಕ ಆರಂಭಿಸುವುದಾದರೆ ಮಂಡ್ಯದಲ್ಲಿ ಜಮೀನು: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 15:43 IST
Last Updated 24 ಡಿಸೆಂಬರ್ 2025, 15:43 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ‘ಅಮೆರಿಕದ ಸ್ಯಾನ್ಸನ್‌ ಗ್ರೂಪ್‌ ಮಂಡ್ಯದಲ್ಲಿ ಸೆಮಿಕಂಡಕ್ಟರ್‌ ಘಟಕ ಆರಂಭಿಸುವುದಾದರೆ, 100 ಎಕರೆ ಜಮೀನು ನೀಡಲು ಸರ್ಕಾರ ಸಿದ್ಧ‘ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಪಾಟೀಲ, ‘ಆ ಕಂಪನಿಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ. ಈ ಯೋಜನೆ ರಾಜ್ಯಕ್ಕೆ ಬಂದು ನೆಲೆಯೂರಬೇಕು ಎನ್ನುವುದು ನಮ್ಮ ಇಚ್ಛೆಯೂ ಆಗಿದೆ’ ಎಂದು ಹೇಳಿದ್ದಾರೆ.

‘ಕುಮಾರಸ್ವಾಮಿ ಅವರು ಈ ಬಗ್ಗೆ ಅ.31 ರಂದು ನನಗೆ ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ  ನ. 24 ರಂದು ಉತ್ತರ ನೀಡಿದ್ದೆವು. ಈ ಮಧ್ಯೆ ಪ್ರಸ್ತಾವಿತ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ಸ್ಯಾನ್ಸನ್‌ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಭಾರತೀಯ ವ್ಯವಹಾರಗಳ ಮುಖ್ಯಸ್ಥ ಅಭಯ್‌ ಕೆ.ರೈ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಅವರ ಕಡೆಯಿಂದ ಈವರೆಗೂ ಉತ್ತರ ಬಂದಿಲ್ಲ’ ಎಂದಿದ್ದಾರೆ.

ADVERTISEMENT

‘ಮಂಡ್ಯ ಜಿಲ್ಲೆಯಲ್ಲಿ ನೀರು, ವಿದ್ಯುತ್‌ ಮತ್ತು ರಸ್ತೆ ಸಂಪರ್ಕ ಸೌಲಭ್ಯವಿರುವ ಕಡೆಯಲ್ಲೇ 100 ಎಕರೆ ಕೊಡಲು ಅಡ್ಡಿಯೇನಿಲ್ಲ. ಕಂಪನಿಯ ಕಡೆಯಿಂದ ಮನವಿ ಬಂದರೆ ಭೂ ಮಂಜೂರಾತಿ ಕಾರ್ಯಸಾಧ್ಯತೆ ಜತೆಗೆ ಇನ್ನಿತರ ಅಗತ್ಯ ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ಪರಿಗಣಿಸಿ ತ್ವರಿತವಾಗಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಈ ಹೊಣೆಯನ್ನು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರಿಗೆ ವಹಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.