ಹಾವೇರಿ: ನಗರದ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಅವರು ಮೇ 23ರಿಂದ ಜೂನ್ 22ರವರೆಗೆ ಒಂದು ತಿಂಗಳು ಮೌನ ಅನುಷ್ಠಾನ ಕೈಗೊಳ್ಳಲಿದ್ದಾರೆ.
ಸದಾಶಿವ ಸ್ವಾಮೀಜಿ, ಪಟ್ಟಾಭಿಷೇಕವಾದ ನಂತರ 10 ವರ್ಷಗಳಿಂದ ಪ್ರತಿವರ್ಷ ಒಂದು ತಿಂಗಳು ಮೌನಾನುಷ್ಠಾನವನ್ನು ಕೈಗೊಂಡು ಆಧ್ಯಾತ್ಮಿಕ ಸಾಧನೆಯಲ್ಲಿ ನಿರತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಭಕ್ತರ ದರ್ಶನಾಶೀರ್ವಾದದಿಂದ ದೂರವುಳಿಯುವ ಸ್ವಾಮೀಜಿ ಸಂಪೂರ್ಣ ಘನ ಆಹಾರ ತ್ಯಜಿಸಿ, ಕೇವಲ ಇಷ್ಟಲಿಂಗ ಪೂಜೆ ಹಾಗೂ ಮೌನ ಅನುಷ್ಠಾನದಲ್ಲಿ ತೊಡಗಲಿದ್ದಾರೆ.
ಅನುಷ್ಠಾನ, ತಪಸ್ಸು, ಧ್ಯಾನದಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಹಾಗೆ ಮನಸ್ಸು ಪ್ರಫುಲ್ಲಗೊಳ್ಳಬೇಕಾದರೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಕೃತಿ ಪರಿಸರದ ಮಡಿಲಿನಲ್ಲಿ ತಪಸ್ಸು ಮಾಡುವ ಪರಿಪಾಠವಿದೆ. ಸದ್ಯದ ಮಹಾಮಾರಿ ಕೊರೊನಾದಿಂದಾಗಿ ಸ್ವಾಮೀಜಿ ಅವರು ಮೌನಾನುಷ್ಠಾನವನ್ನು ಶ್ರೀಮಠದಲ್ಲಿ ಮಾಡುತ್ತಿದ್ದಾರೆ ಎಂದು ಶ್ರೀಮಠದ ಆಡಳಿತ ಮಂಡಳಿ ತಿಳಿಸಿದೆ.
ಜೂನ್ 22ರಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜೇಂದ್ರ ಸ್ವಾಮೀಜಿ ಅವರು ಸದಾಶಿವ ಮಹಾಸ್ವಾಮೀಜಿಗೆ ಕರ್ಣ ಪ್ರಸಾದ ಕರುಣಿಸಿದ ನಂತರವೇ ಭಕ್ತರಿಗೆ ದರ್ಶನ ಮತ್ತು ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.