ADVERTISEMENT

‘ಯುವ ಸಂಸದರಿಗೆ ಸಚಿವ ಸ್ಥಾನದ ಆಸೆ ಸಲ್ಲ’

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಮೋದಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 28 ಮೇ 2019, 20:00 IST
Last Updated 28 ಮೇ 2019, 20:00 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಯುವ ಸಂಸದರು ಸಚಿವ ಸ್ಥಾನಕ್ಕೆ ಆಸೆ ಪಡಲೇಬಾರದು. ಹಿರಿಯರಿಗೆ ಅವಕಾಶ ನೀಡಿ, ತಾವು ದೇಶ ಕಟ್ಟುವ ಕೆಲಸಕ್ಕೆ ಮುಡಿಪಾಗಿರಬೇಕು’ ಎಂದು ಸಂಸದ ಪ್ರತಾಪ ಸಿಂಹ ಇಲ್ಲಿ ಅಭಿಪ್ರಾಯಪಟ್ಟರು.

‘ತೇಜಸ್ವಿ ಸೂರ್ಯ ಹಾಗೂ ನಾನು ಸಚಿವ ಸ್ಥಾನಕ್ಕೆ ಆಸೆ ಪಡುತ್ತಲೇ ಇಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವ ಅವಕಾಶ ನಮ್ಮ ಪೀಳಿಗೆಗೆ ಸಿಕ್ಕಿಲ್ಲ. ಆದರೆ, ದೇಶ ಕಟ್ಟುವ ಅವಕಾಶ ಸಿಕ್ಕಿದೆ. ಅದೇ ಆದ್ಯತೆಯಾಗಬೇಕು’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಿರಿಯರೂ, ಪ್ರಮುಖ ದಲಿತ ನಾಯಕರೂ ಆಗಿರುವ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಅದರಿಂದ ಒಳಿತಾಗುತ್ತದೆ’ ಎಂದರು.

ADVERTISEMENT

ಯೋಗ ದಿನಕ್ಕೆ ಮೋದಿ?: ಜೂನ್‌ 21ರಂದು ಮೈಸೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಸಿದ್ಧತೆ ನಡೆದಿದೆ ಎಂದರು.

‘ನಾನು ಪ್ರಕಾಶ್‌ ರೈ ಅಭಿಮಾನಿ’
‘ಮೋದಿಯನ್ನು ಟೀಕಿಸಿ ಲಾಭ ಪಡೆಯಬಹುದು ಎಂದು ನಟ ಪ್ರಕಾಶ್‌ ರೈ ಲೆಕ್ಕಾಚಾರ ಹಾಕಿದ್ದರು. ಅದೀಗ ಸುಳ್ಳಾಗಿದೆ’ ಎಂದು ಪ್ರತಾಪ ಸಿಂಹ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ನಮ್ಮಿಬ್ಬರಲ್ಲೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ನಾನು ಅವರ ನಟನೆಯ ಅಭಿಮಾನಿ. ಹೆಮ್ಮೆಯ ಕನ್ನಡಿಗನಾಗಿ ಪರಭಾಷೆಗಳಲ್ಲೂ ನಟಿಸಿ ಕೀರ್ತಿ ತಂದಿದ್ದಾರೆ. ಅವರ ರಾಜಕೀಯ ಜೀವನ ಈಗ ಮುಗಿದಿದೆ; ನಟನೆಯಲ್ಲಿ ಮತ್ತಷ್ಟು ಬೆಳೆಯಲಿ’ ಎಂದು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.