ADVERTISEMENT

ಬಿಜೆಪಿಯಲ್ಲಿನ ಕಿಚ್ಚಿಗೆ ಪ್ರತಾಪ ಸಿಂಹ VS ರಾಮದಾಸ್ ಕಾಳಗವೇ ಸಾಕ್ಷಿ‌: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2022, 9:16 IST
Last Updated 16 ನವೆಂಬರ್ 2022, 9:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿರ್ಮಿಸಿರುವ ಬಸ್‌ ನಿಲ್ದಾಣದ ಮೇಲಿನ ಗುಂಬಜ್ ತೆರವಿಗೆ ಶತಸಿದ್ಧ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿರುವುದು ವಿವಾದಕ್ಕೀಡಾಗಿದೆ.

ಇದೇ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಯೊಳಗೆ ಕಿಚ್ಚು ಎಷ್ಟಿದೆ ಎನ್ನುವುದಕ್ಕೆ ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ’ ಎಂದು ವ್ಯಂಗ್ಯವಾಡಿದೆ.

‘ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ. ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿಯವರು ತಮ್ಮ ಮನೆಯ ಕಾವಲಿಯ ತೂತನ್ನು ನೋಡಿಕೊಂಡರೆ ಒಳಿತು’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ADVERTISEMENT

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಪ್ರತಾಪ ಸಿಂಹ, ‘ಗುಂಬಜ್ ತೆರವಿಗೆ ನಾನು ನೀಡಿದ್ದ ಗಡುವಿನಲ್ಲಿ 2 ದಿನ ಬಾಕಿ ಇದೆ. ಅಷ್ಟರಲ್ಲಿ ತೆರವುಗೊಳಿಸದಿದ್ದರೆ, ಈಗಾಗಲೇ ಹೇಳಿದಂತೆ ನಾನೇ ತೆರವು ಮಾಡುತ್ತೇನೆ’ ಎಂದಿದ್ದರು.

‘ನಾನು ಹೇಳಿಕೆ ಕೊಡುವ ಮುನ್ನ ಗುಂಬಜ್ ಮಾತ್ರ ಇತ್ತು. ರಾತ್ರೋರಾತ್ರಿ ಅದರ ಮೇಲೆ ಕಳಶ ಹೇಗೆ ಬಂತು?’ ಎಂದು ಕೇಳಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿನ ಚರ್ಚೆಯನ್ನು ಉಲ್ಲೇಖಿಸಿ ‘ಮೈಸೂರಿನ ಅಂಬಾವಿಲಾಸ ಅರಮನೆಯ ಮೇಲಿನ ಗೋಪುರಕ್ಕೂ, ಮಸೀದಿ ಮೇಲಿನ ಗುಂಬಜ್‌ಗೂ ವ್ಯತ್ಯಾಸ ಇಲ್ಲವೇ? ಹೋಲಿಕೆ ಮಾಡುವ ಮುನ್ನ ವಾಸ್ತುಶಿಲ್ಪ ಕುರಿತು ಓದಿ’ ಎಂದು ಹೇಳಿದ್ದರು.

ಅರಮನೆಯ ಮಾದರಿ, ಧರ್ಮದ ಆಧಾರದ್ದಲ್ಲ: ರಾಮದಾಸ್ ಸ್ಪಷ್ಟನೆ
‘ಪಾರಂಪರಿಕ ನಗರಿಯ ಮಹತ್ವ ಸಾರಲು ಕೃಷ್ಣರಾಜ ಕ್ಷೇತ್ರದಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳನ್ನು ಅರಮನೆ ವಿನ್ಯಾಸದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಯಾವುದೇ ಧರ್ಮದ ಆಧಾರದಲ್ಲಲ್ಲ’ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.

‘ನಿಲ್ದಾಣದ ಮೇಲೆ ಗುಂಬಜ್‌ ವಿನ್ಯಾಸ ಮಾಡಲಾಗಿದೆ’ ಎಂಬ ವಿವಾದ ಕುರಿತು ಹೇಳಿಕೆ ನೀಡಿರುವ ಅವರು, ‘ವಿನ್ಯಾಸವನ್ನು ತಪ್ಪಾಗಿ ಅರ್ಥೈಸಿ ಮಸೀದಿಯಂತೆ ನಿರ್ಮಿಸಲಾಗುತ್ತಿದೆ, ಗುತ್ತಿಗೆದಾರ ಮುಸ್ಲಿಂ ಎಂದು ವದಂತಿ ಹಬ್ಬಿಸುವ ಕುರಿತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

‘ನಗರದಲ್ಲಿ ಈಗಾಗಲೇ ಹಲವೆಡೆ ಇದೇ ಮಾದರಿಯ ತಂಗುದಾಣಗಳಿವೆ. ನಾವು ಅದೇ ಮಾದರಿ ಅನುಸರಿಸಿದ್ದೇವೆ. ಸಂಸದ ಪ್ರತಾಪ ಸಿಂಹ ಹೇಳಿಕೆ ನಂತರ ರಾತ್ರೋರಾತ್ರಿ ಕಳಶ ಅಳವಡಿಸಿಲ್ಲ. ಕಳೆದ ವಾರವೇ ಹಾಕಲಾಗಿದೆ‘ ಎಂದು ಸಮರ್ಥಿಸಿಕೊಂಡಿದ್ದಾರೆ.

‘ವಿನ್ಯಾಸವನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲು ಸರ್ಕಾರಕ್ಕೆಪತ್ರ ಬರೆದಿದ್ದು, ತಪ್ಪಿದೆ ಎಂದು ಸಮಿತಿ ಹೇಳಿದರೆ ಬದಲಾಯಿಸಲು ನಮ್ಮ ಅಭ್ಯಂತರವೇನಿಲ್ಲ’ ಎಂದು ತಿಳಿಸಿದ್ದಾರೆ.

ಗುಂಬಜ್‌ ಕೆಡವಲು ಅವನ್ಯಾರು?– ಸಿದ್ದರಾಮಯ್ಯ
‘ಗುಂಬಜ್ ಕೆಡವಲು ಅವನ್ಯಾರು. ಸಂಸದನಾಗಿ ಸಾಮಾನ್ಯಜ್ಞಾನ ಬೇಡವೇ. ಮನೆ ದುಡ್ಡು ಹಾಕಿ ನಿಲ್ದಾಣ ಕಟ್ಟಿಸಿದ್ದಾನಾ? ಅಧಿಕಾರಿಗಳು ವಿನ್ಯಾಸ ನೀಡಿದಾಗ ಏನು ಮಾಡ್ತಿದ್ದರು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.