ಕಾರವಾರ:‘ಕಾರ್ಗಿಲ್ ವಿಜಯ ದಿವಸ್’ ಅಂಗವಾಗಿ ಜುಲೈ 20ರಂದು ಸಾರ್ವಜನಿಕರು, ದೇಶದ ಏಕೈಕ ಯುದ್ಧ ವಿಮಾನ ವಾಹಕ ನೌಕೆ ‘ವಿಕ್ರಮಾದಿತ್ಯ’ಕ್ಕೆಭೇಟಿ ನೀಡಿ ವೀಕ್ಷಿಸಲು ನೌಕಾಪಡೆ ಅವಕಾಶ ಕಲ್ಪಿಸಿದೆ.
ನಗರ ಸಮೀಪದ ಸೀಬರ್ಡ್ ನೌಕಾನೆಲೆಗೆ ಅಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು (ಐದನೇ ತರಗತಿ ಮತ್ತು ಮೇಲಿನವರು ಮಾತ್ರ) ಭೇಟಿ ನೀಡಬಹುದು. ‘ಐಎನ್ಎಸ್ ವಿಕ್ರಮಾದಿತ್ಯ’ ಮತ್ತು ‘ಐಎನ್ಎಸ್ ಸುವರ್ಣ’ ನೌಕೆಗಳು ನಾಗರಿಕರ ಪ್ರವೇಶಕ್ಕೆ ಅಂದು ಮುಕ್ತವಾಗಿರುತ್ತವೆ.ಭದ್ರತೆಯಕಾರಣದಿಂದ ಕೆಲವುನಿಬಂಧನೆಗಳನ್ನು ವಿಧಿಸಲಾಗಿದೆ.
ಭೇಟಿನೀಡುವ ಸಾರ್ವಜನಿಕರಿಗೆ ಅರಗಾದ ಮುಖ್ಯ ಗೇಟ್ನಿಂದ ಮಾತ್ರ ಪ್ರವೇಶವಿರುತ್ತದೆ. ತಮ್ಮೊಂದಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರದಿಂದ ನೀಡಲಾಗಿರುವ ಯಾವುದೇ ಫೋಟೊ ಗುರುತಿನ ಚೀಟಿ ಹೊಂದಿರಬೇಕು. ಸಾರ್ವಜನಿಕರ ವಾಹನಗಳನ್ನುನೌಕಾನೆಲೆಯ ಹೊರಗೆ ನಿಗದಿ ಮಾಡಲಾದ ಜಾಗದಲ್ಲೇ ನಿಲ್ಲಿಸಬೇಕು. ಅಲ್ಲಿಂದ ನೌಕೆಗಳಿರುವ ಜೆಟ್ಟಿಗೆ ನೌಕಾಪಡೆಯ ಬಸ್ಗಳಲ್ಲಿ ಕರೆದುಕೊಂಡು ಹೋಗಿ ನಂತರ ಮುಖ್ಯ ಗೇಟ್ಗೆ ಕರೆತರಲಾಗುತ್ತದೆ.
ಸಾರ್ವಜನಿಕರಿಗೆ ಪ್ರವೇಶದ ಪಾಸ್ಗಳನ್ನು ಮುಖ್ಯ ಗೇಟ್ನಲ್ಲೇ ನೀಡಲಾಗುತ್ತದೆ. ನೌಕಾನೆಲೆಯಿಂದ ವಾಪಸ್ ಬಂದಾಗ ಅವುಗಳನ್ನು ಪುನಃ ಭದ್ರತಾ ಸಿಬ್ಬಂದಿಗೆ ಕೊಡಬೇಕು. ಮೊಬೈಲ್ ಫೋನ್ ಹೊರತುಪಡಿಸಿ ದೃಶ್ಯ, ಧ್ವನಿ ಮುದ್ರಣ ಮಾಡಿಕೊಳ್ಳುವ ಕ್ಯಾಮೆರಾ ಅಥವಾ ಇನ್ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನುನೌಕಾನೆಲೆಯ ಒಳಗೆತರುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜುಲೈ 26ರಂದು 20ನೇ ‘ಕಾರ್ಗಿಲ್ ವಿಜಯ ದಿವಸ್’ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನೌಕಾನೆಲೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.