ADVERTISEMENT

9 ಕಿ.ಮೀ. ಉದ್ದದ ರಾಷ್ಟ್ರಧ್ವಜ ಹೊತ್ತು ಸಾಗಿದ ಜನಸ್ತೋಮ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 12:22 IST
Last Updated 15 ಆಗಸ್ಟ್ 2022, 12:22 IST
ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪ ಬಳಿ ಸಂತೋಷ ಲಾಡ್‌ ಪ್ರತಿಷ್ಠಾನ ಆಯೋಜಿಸಿದ್ದ ಬೃಹತ್ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು
ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪ ಬಳಿ ಸಂತೋಷ ಲಾಡ್‌ ಪ್ರತಿಷ್ಠಾನ ಆಯೋಜಿಸಿದ್ದ ಬೃಹತ್ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು   

ಕಲಘಟಗಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ 9 ಕಿ.ಮೀ. ಉದ್ದದ ರಾಷ್ಟ್ರಧ್ವಜವನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಹೊತ್ತು ಸಾಗಿದರು.

ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ಜಾಥಾ ತಾಲ್ಲೂಕಿನ ದಾಸ್ತಿಕೊಪ್ಪದಿಂದ ಆರಂಭಗೊಂಡಿತು. ಸುಮಾರು 12 ಸಾವಿರ ಮಹಿಳೆಯರು ರಾಷ್ಟ್ರಧ್ವಜದೊಂದಿಗೆ ಪೂರ್ಣಕುಂಭ ಹೊತ್ತು ಸಾಗಿದರು.

ಹೆಜ್ಜೆ ಮೇಳ, ಕೋಲಾಟ, ಡೊಳ್ಳಿನ ಮಜಲು, ಚಿನ್ನ ಗೊಂಬೆಗಳ ಕುಣಿತ, ಭಜನೆ, ಜಾಂಜ್‌ ಮೇಳ, ಗೌಳಿ ದಡ್ಡಿಯ ಸಾಂಪ್ರದಾಯಿಕ ಕಲಾ ತಂಡಗಳ ಜಾನಪದ ಕಲಾತಂಡಗಳು ಮೆರವಣಿಗೆಗೆ ಇನ್ನಷ್ಟು ಕಳೆ ಕಟ್ಟಿದವು.

ADVERTISEMENT

ತಾಲ್ಲೂಕಿನ ಹಿರೇಹೊನ್ನಳ್ಳಿ ಬಳಿ ಬಸವಾದಿ ಶರಣರ ಬಳಗದಿಂದ ಬಸವ ಭಾರತದ ಸ್ತಬ್ಧ ಚಿತ್ರ ಗಮನ ಸೆಳೆಯಿತು. ಸಂತೋಷ್ ಲಾಡ್ ಅವರು ಮೆರವಣಿಗೆಯುದ್ದಕ್ಕೂ ರಾಷ್ಟ್ರಧ್ವಜ ಹಿಡಿದು ಜನರನ್ನು ಹುರಿದುಂಬಿಸಿದರು.

ನಂತರ ನಗರದ ಎಪಿಎಂಸಿ ಆವರಣದಲ್ಲಿ ಸ್ಥಾಪಿಸಲಾಗಿದ್ದ ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಾನಪದ ಹಾಡುಗಳು, ಸೋಬಾನೆ ಪದ, ಸಿನಿಮಾ ಹಾಡುಗಳ ಗಾಯನ ಕಾರ್ಯಕ್ರಮ ಜರುಗಿತು.ದಾರಿಯುದ್ದಕ್ಕೂ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.