ಮದ್ದೂರು: ‘ನಿವೃತ್ತ ಐಪಿಎಸ್ ಅಧಿಕಾರಿ, ಎಎಪಿ ಮುಖಂಡ ಭಾಸ್ಕರ್ ರಾವ್ ಹೇಳಿಕೆಗೆ ನಾವು ಉತ್ತರ ಕೊಡಬಾರದು. ಸಂಬಂಧ ಪಟ್ಟವರು ಹೇಳಿಕೆ ಕೊಡುತ್ತಾರೆ. ಅವನ ಮಾತಿಗೆ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇಲ್ಲ’ ಎಂದು ಏಕ ವಚನದಲ್ಲೇ ಸಚಿವ ಅಶ್ವತ್ಥನಾರಾಯಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಯುವ ಮೋರ್ಚಾದಿಂದಗುರು ವಾರ ಅಭಿನಂದನೆ ಸ್ವೀಕರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಬಂಡವಾಳವನ್ನು ಕೆಲವೇ ದಿನಗಳಲ್ಲಿ ಬಿಚ್ಚಿಡಲಾಗುವುದು’ ಎಂದು ಭಾಸ್ಕರ ರಾವ್ ನೀಡಿರುವ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿಚಾರವಾಗಿ ಈಗ ಆಲ್ ಕೈದಾ ಸಂಘಟನೆ ಬೆಂಬಲವಾಗಿ ನಿಂತಿದೆ. ಇದು ಖಂಡನೀಯ. ಇಂಥ ಸಂಘಟನೆ ಜತೆ ಕೈ ಜೋಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಭಯೋತ್ಪಾದಕ ಸಂಘಟನೆಗಳು ದೇಶಕ್ಕೆ ಮಾರಕವಾಗಿವೆ. ಇಂಥ ಸಂಘಟನೆ ಮತ್ತು ವ್ಯಕ್ತಿಗಳು ಇರುವ ಕಡೆ ಅಪಾಯ ಕಟ್ಟಿಟ್ಟ ಬುತ್ತಿ.
ನಿಷೇಧಿತ ಸಂಘಟನೆ ಮತ್ತು ವ್ಯಕ್ತಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಮುಸ್ಲಿಂ ಧಾರ್ಮಿಕ ವಿವಾದ ಪ್ರಕರಣಗಳ ವಿಚಾರವಾಗಿ ಕಾನೂನಿನಲ್ಲಿ ಏನೆಲ್ಲ ಅವಕಾಶ ಇದೆಯೋ ಅದನ್ನೆಲ್ಲ ಮಾಡುತ್ತೇವೆ. ಕಾನೂನಿನಲ್ಲಿ ಇಲ್ಲದೆ ಇರುವುದನ್ನು ಅನುಷ್ಠಾನ ಮಾಡುವುದಿಲ್ಲ. ಸಚಿವ ಸಂಪುಟ ಪುನರ್ ರಚನೆ ಮಾಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ವರಿಷ್ಠರ ಜತೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಏನು ಹೇಳಿದ್ದರು ಭಾಸ್ಕರ್ ರಾವ್?
‘ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದಾಗ ಕೋವಿಡ್ ಪರಿಸ್ಥಿತಿ ತೀವ್ರಗೊಂಡಿತ್ತು. ಸ್ವಿಗ್ಗಿ, ಜೊಮಾಟೊ ಸಿಬ್ಬಂದಿಗೆ ಪಾಸ್ ವಿತರಿಸುವಲ್ಲಿ ಪೊಲೀಸರಿಂದ ಭ್ರಷ್ಟಾಚಾರ ನಡೆದಿರುವುದಾಗಿ ಅಂದಿನ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ನನ್ನ ಮೇಲೆ ಆರೋಪ ಮಾಡಿದರು. ಇದನ್ನು ಕೇಳಿ ಆಘಾತ, ದುಃಖವಾಯಿತು. ತಕ್ಷಣವೇ ರಾಜೀನಾಮೆ ನೀಡಲು ತೀರ್ಮಾನಿಸಿದ್ದೆ. ಆದರೆ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಮತ್ತು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವಕಾಶ ನೀಡಲಿಲ್ಲ’ ಎಂದು ಭಾಸ್ಕರರಾವ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.