ಬಿ.ವೈ.ವಿಜಯೇಂದ್ರ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು 1,000 ದಿನ ಪೂರೈಸಿದ ನೆಪದಲ್ಲಿ ಭೂಗ್ಯಾರಂಟಿ ಸಮಾವೇಶ ನಡೆಸುತ್ತಿದ್ದರೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಇದು ಪ್ರಚಾರದ ಗೀಳಿನ ಸರ್ಕಾರ ಎಂದು ಹೇಳಿವೆ.
‘ಸಾವಿರ ಸುಳ್ಳಿನ, ಸಾವಿರ ದಿನಗಳು’
‘ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 1,000 ದಿನಗಳನ್ನು, 1,000 ಸುಳ್ಳುಗಳ ಮೂಲಕ ಪೂರೈಸಿದೆ. ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳ ಪೈಕಿ ಯಾವೊಂದನ್ನೂ ಪೂರೈಸಿಲ್ಲ’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಹೊರಿಸಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆದರೆ, ಈ ಸರ್ಕಾರದಲ್ಲಿ ಭ್ರಷ್ಟಾಚಾರ ವಿಪರೀತ ಎನಿಸುವಷ್ಟಾಗಿದೆ’ ಎಂದರು.
‘ಹಳೆಯ ಪಿಂಚಣೆ ಯೋಜನೆ ಮರುಜಾರಿ, ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ತಾನು ನೀಡಿದ ಈ ಭರವಸೆಗಳನ್ನು ಈಡೇರಿಸಿಯೇ ಇಲ್ಲ. ಬಡವರಿಗೆ ಲಕ್ಷ ಮನೆಗಳನ್ನು ನೀಡುತ್ತೇವೆ ಎಂದಿದ್ದರು. ಮನೆಗಳು ಎಲ್ಲಿವೆ’ ಎಂದು ಪ್ರಶ್ನಿಸಿದರು.
‘ಭೂಗ್ಯಾರಂಟಿ ಸಿಕ್ಕಿದ್ದು ಸಚಿವರಿಗೆ’
‘ರಾಜ್ಯ ಸರ್ಕಾರಕ್ಕೆ 1,000 ದಿನ ಆಗಿದೆ ಎಂದು ಜನರಿಗೆ ಭೂಗ್ಯಾರಂಟಿ ಕೊಡುತ್ತಿದ್ದಾರಂತೆ. ನಿಜಕ್ಕೂ ಭೂಗ್ಯಾರಂಟಿ ಸಿಕ್ಕಿರುವುದು ರಾಜ್ಯ ಸರ್ಕಾರದ ಸಚಿವರಿಗೆ. ಕೆರೆಯ ಜಮೀನು ಕಬಳಿಕೆ ಮಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಈ ಗ್ಯಾರಂಟಿ ಸಿಕ್ಕಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಲಕ್ಷ ಜನರಿಗೆ ಹಕ್ಕುಪತ್ರಗಳನ್ನು ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಆ ಒಂದು ಲಕ್ಷ ಜನರು ಯಾರು, ಎಲ್ಲಿಂದ ಬಂದರು, ಅವರಿಗೆ ನೀಡುತ್ತಿರುವ ಹಕ್ಕುಪತ್ರಗಳು ಯಾವುವು, ಹಕ್ಕಪತ್ರಕ್ಕೆ ಜನರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದರು ಎಂಬುದಕ್ಕೆ ಸಿದ್ದರಾಮಯ್ಯ ಉತ್ತರಿಸಬೇಕು’ ಎಂದು ಆಗ್ರಹಿಸಿದರು.
‘ಇದು ಅಭಿವೃದ್ಧಿ ಶೂನ್ಯ ಸರ್ಕಾರ. ರಾಜ್ಯವು ಅಭಿವೃದ್ಧಿ ಆಗಿದೆಯೇ ಎಂಬುದನ್ನು ಪರಿಶೀಲಿಸಲು ಬಜೆಟ್ನಲ್ಲಿ ಬಂಡವಾಳ ವೆಚ್ಚಕ್ಕೆ ಎಷ್ಟು ಹಣ ನೀಡಲಾಗಿದೆ ಮತ್ತು ಅದರಲ್ಲಿ ಎಷ್ಟು ವಿನಿಯೋಗ ಮಾಡಲಾಗಿದೆ ಎಂಬುದನ್ನು ನೋಡಬೇಕು. ಸುಮ್ಮನೆ ರಾಜ್ಯದ ಸಾಲ ಹೆಚ್ಚು ಮಾಡಿದರೆ ಅಭಿವೃದ್ಧಿ ಆಗುವುದಿಲ್ಲ. ಹತ್ತಾರು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನರ ಮುಂದೆ ಈ ಎಲ್ಲ ವಿವರಗಳನ್ನು ತೆರೆದಿಡಲಿ’ ಎಂದು ಸವಾಲು ಹಾಕಿದರು.
‘ಜನರ ಲೂಟಿ ಮಾಡುವ ಸರ್ಕಾರ’
‘ಸರ್ಕಾರಿ ಭೂಮಿಯನ್ನು ನೋಂದಣಿ ಮಾಡಿಕೊಡುವ ನೆಪದಲ್ಲಿ ರಾಜ್ಯ ಸರ್ಕಾರವು ಜನರನ್ನು ಲೂಟಿ ಮಾಡುತ್ತಿದೆ. ಆದರೆ ಅದಕ್ಕೆ, ‘ಹಕ್ಕುಪತ್ರ ವಿತರಣೆ’ ಎಂದು ಕರೆಯುತ್ತಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮ್ಮ ಸರ್ಕಾರ ಇದ್ದಾಗ, ಅಕ್ರಮ ಇದ್ದುದನ್ನು ಸಕ್ರಮ ಮಾಡಿದ್ದೆವು. ಜತೆಗೆ ಸಾಲಸಿಗುವ ವ್ಯವಸ್ಥೆಯನ್ನೂ ಮಾಡಿದ್ದೆವು. ಈಗ ಸರ್ಕಾರವು, ಸರ್ಕಾರಿ ಜಮೀನನ್ನೇ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿ ಬಡ ಕುಟುಂಬದ ಮೇಲೆ ಮೂರು–ನಾಲ್ಕು ಲಕ್ಷ ರೂಪಾಯಿ ಹೊರೆ ಹೇರಿದೆ’ ಎಂದಿದ್ದಾರೆ. ‘ಗ್ರಾಮೀಣ ಪ್ರದೇಶದಲ್ಲಿ ಹಕ್ಕುಪತ್ರ ವಿತರಣಾ ಸಮಾವೇಶ ಮಾಡಿದರೆ, ಜನರು ಬರುವುದಿಲ್ಲ ಎಂದು ಇವರಿಗೆ ಗೊತ್ತು. ಹೀಗಾಗಿ ಹಳ್ಳಿಗಾಡಿನಲ್ಲಿ ಸಮಾವೇಶ ಮಾಡಿದ್ದಾರೆ. ಇದು ಶೂನ್ಯ ಸಾಧನೆಯ, ಭ್ರಷ್ಟಾಚಾರದ ಸಮಾವೇಶ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.