ADVERTISEMENT

ತಾಕತ್ತಿದ್ದರೆ ಹೋರಾಟದಲ್ಲಿ ಭಾಗಿಯಾದ ಶಾಸಕರನ್ನು ವಜಾ ಮಾಡಿ:CMಗೆ ಮೃತ್ಯುಂಜಯ ಶ್ರೀ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 10:42 IST
Last Updated 14 ಡಿಸೆಂಬರ್ 2024, 10:42 IST
<div class="paragraphs"><p>ಬಸವಜಯ ಮೃತ್ಯುಂಜಯ ಸ್ವಾಮೀಜಿ</p></div>

ಬಸವಜಯ ಮೃತ್ಯುಂಜಯ ಸ್ವಾಮೀಜಿ

   

ಬೆಳಗಾವಿ: ‘ನಿಮಗೆ ತಾಕತ್ತಿದ್ದರೆ, ಮೀಸಲಾತಿಗಾಗಿ ನಾವು ನಡೆಸಿದ ಹೋರಾಟದಲ್ಲಿ ಭಾಗಿಯಾದ ಕಾಂಗ್ರೆಸ್‌ನ ನಾಯಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿಗೆ ಸವಾಲು ಹಾಕಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಹೋರಾಟಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಬಾಬಾಸಾಹೇಬ ಪಾಟೀಲ, ರಾಜು ಕಾಗೆ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಬಂದಿದ್ದರು. ಒಂದುವೇಳೆ ನಮ್ಮ ಹೋರಾಟ ಸಂವಿಧಾನ ವಿರೋಧಿಯೇ ಆಗಿದ್ದರೆ, ಅವರ ವಿರುದ್ಧ ಕ್ರಮ ವಹಿಸಿ. ಸಚಿವರಿಂದ ರಾಜೀನಾಮೆ ಕೇಳಿ’ ಎಂದು ತಿರುಗೇಟು ಕೊಟ್ಟರು.

ADVERTISEMENT

‘ನಾಲ್ಕು ವರ್ಷಗಳಿಂದ ನಾವು ಶಾಂತಿಯುತವಾಗಿ ಹೋರಾಡಿದ್ದೆವು. ಆದರೆ, ಚನ್ನಮ್ಮನ ನಾಡಿನಲ್ಲಿ ಈಗ ಕ್ರಾಂತಿ ಮಾಡಲು ಸರ್ಕಾರವೇ ಬಡಿದೆಬ್ಬಿಸಿದೆ. ನಮ್ಮ ಸಮಾಜದ ಬಗ್ಗೆ ನಿಮಗೆ ಕಳಕಳಿ ಇರದಿದ್ದರೆ, ಮೀಸಲಾತಿ ಕೊಡಲಾಗದು ಎಂದು ಹೇಳಿ ಪರವಾಗಿಲ್ಲ. ಆದರೆ, ಹೋರಾಟವೇ ಸಂವಿಧಾನ‌ ವಿರೋಧಿ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಹಿಂದಕ್ಕೆ ಪಡೆದು ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಹೋರಾಟ ಸಂವಿಧಾನ ವಿರೋಧಿ ಆಗಿದ್ದರೆ, ಪ್ರತಿಭಟನೆಗೆ ಅನುಮತಿ ಏಕೆ ನೀಡಿದ್ದೀರಿ’ ಎಂದು ಪ್ರಶ್ನಿಸಿದ ಶ್ರೀಗಳು, ‘ನೀವು ಬಸವಣ್ಣನನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದೀರಿ. ಆದರೆ, ನಮ್ಮ ಸಮಾಜ ನಿಂದಿಸುವ ಮೂಲಕ ಬಸವಣ್ಣನಿಗೆ ಪರೋಕ್ಷವಾಗಿ ಅಪಮಾನ ಮಾಡಿದ್ದೀರಿ. ಲಿಂಗಾಯತರ ಸ್ವಾಭಿಮಾನ ಕೆಣಕಲು ಪ್ರಯತ್ನಿಸಿದ್ದೀರಿ. ನಮ್ಮದು ಸಂವಿಧಾನ ವಿರೋಧಿ ಹೋರಾಟ ಎಂದು ತಾವು ಕೊಟ್ಟ ಹೇಳಿಕೆಯನ್ನು ಸದನದ ಕಡತದಿಂದ ತೆಗೆದು ಹಾಕಬೇಕು’ ಎಂದು ಆಗ್ರಹಿಸಿದರು.

16ರಿಂದ ಧರಣಿ ಸತ್ಯಾಗ್ರಹ: ‘ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ಡಿ.16ರಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ಮಾಡುತ್ತೇನೆ. ಪ್ರತಿದಿನ ಒಂದೊಂದು ಜಿಲ್ಲೆಯ ಮುಖಂಡರು ನನ್ನೊಂದಿಗೆ ಭಾಗವಹಿಸಲಿದ್ದಾರೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಸಮರ್ಥಿಸಿಕೊಂಡ ಗೃಹ ಸಚಿವ ಜಿ.ಪರಮೇಶ್ವರ್‌ ವಿರುದ್ಧ ವಾಗ್ದಾಳಿ ನಡೆಸಿದ ಸ್ವಾಮೀಜಿ, ‘ನೀವು ಓದಿದ್ದು, ಬೆಳೆದಿದ್ದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ. ಆದರೆ, ನಮ್ಮ ಮೇಲಿನ ಹಲ್ಲೆ ಸಮರ್ಥಿಸಿಕೊಂಡಿದ್ದು ಸರಿಯಲ್ಲ. ಇದು ಸಿದ್ಧಗಂಗಾ ಮಠಕ್ಕೆ ನೀವು ಮಾಡಿದ ಅಪಮಾನ. ನಿಮಗೆ ತುತ್ತು ಕೊಟ್ಟ ಸಮಾಜವನ್ನು ನೀವು ಅವಮಾನಿಸಿದ್ದೀರಿ. ಲಿಂಗಾಯತರ ಮೇಲಿನ ಹಲ್ಲೆ ಘಟನೆ ಖಂಡಿಸಿ, ಕೊರಟಗೆರೆ ಕ್ಷೇತ್ರದಲ್ಲಿ ಲಿಂಗಾಯತರು ಧರಣಿ ಮಾಡಬೇಕು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿಯವರಿಂದ ಸುಪಾರಿ ತೆಗೆದುಕೊಂಡಿದ್ದಾರೆ’ ಎಂಬ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ನಾನು ಹೋರಾಟಕ್ಕಾಗಿ ಯಾರಿಂದಲೂ ಸುಪಾರಿ ಪಡೆದಿಲ್ಲ. ಇಂಥ ಹೋರಾಟಗಾರರೇ ಸುಪಾರಿ ಪಡೆದುಕೊಂಡಿರಬಹುದು’ ಎಂದು ತಿರುಗೇಟು ಕೊಟ್ಟರು.

‘ನಮ್ಮ ಅನ್ನದ ತಟ್ಟೆಗೆ ಕೈಹಾಕಿದರೆ, ಅವರ ಕೈ ಕತ್ತರಿಸುತ್ತೇವೆ’ ಎಂಬ ಶಿವರಾಮು ಆರೋಪಕ್ಕೆ ಪ್ರತಿಕ್ರಿಯಿಸಿ, ‘ಹಾಗೇ ಮಾತನಾಡುವುದೇ ಅವರ ಗುಣ. ಆದರೆ, ನಾವು ಅಹಿಂಸಾತ್ಮಕವಾಗಿ ಹೇಳಿಕೆ ಕೊಡುತ್ತೇವೆ. ಬಸವಣ್ಣನವರ ತತ್ವದಡಿ ನಾವು ಹೋರಾಡುತ್ತೇವೆ. ಅಸಾಂವಿಧಾನಿಕ ಪದ ಬಳಸದೆ, ಸಂಸ್ಕಾರಯುತವಾದ ಭಾಷೆ ಬಳಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.