ಬೆಂಗಳೂರು: ಈ ಸಾಲಿನ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಒಂಬತ್ತು ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ಪ್ರೋತ್ಸಾಹಧನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಜೂರು ಮಾಡಿದ್ದಾರೆ.
ಇದೇ 26ರಿಂದ ಆಗಸ್ಟ್ 11ರವರೆಗೆ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಆ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿರುವ ರಾಜ್ಯದ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷ ಮತ್ತು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರು ಮನವಿ ಸಲ್ಲಿಸಿದ್ದರು.
ಈ ಒಲಿಂಪಿಕ್ಸ್ನ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೊನ್ನಪ್ಪ, ಗಾಲ್ಫ್ನಲ್ಲಿ ಅದಿತಿ ಅಶೋಕ್, ಫ್ರೀಸ್ಟೈಲ್ ಈಜಿನಲ್ಲಿ ಧಿನಿಧಿ ದೇಸಿಂಗೂ, ಮಿಶ್ರ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ ಮತ್ತು ಟೇಬಲ್ ಟೆನ್ನಿಸ್ನಲ್ಲಿ ಅರ್ಚನಾ ಕಾಮತ್ ಸೇರಿ ರಾಜ್ಯದ ಐವರು ಮಹಿಳಾ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಈಜಿನಲ್ಲಿ ಶ್ರೀಹರಿ ನಟರಾಜ್, ಟೆನ್ನಿಸ್ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ನಲ್ಲಿ ನಿಶಾಂತ್ ದೇವ್, ಮಿಶ್ರ ರಿಲೇ ಓಟದಲ್ಲಿ ಮಿಜೋ ಚಾಕೋ ಸೇರಿ ರಾಜ್ಯದ ನಾಲ್ವರು ಪುರುಷ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಒಂಬತ್ತು ಕ್ರೀಡಾಪಟುಗಳಿಗೆ ರಾಜ್ಯ ಒಲಿಂಪಿಕ್ಸ್ ಅಸೋಸಿಯೇಷನ್ ಕಡೆಯಿಂದ ಪ್ರತ್ಯೇಕ ನೆರವು ನೀಡಲಾಗುತ್ತದೆ ಎಂದು ಗೋವಿಂದರಾಜು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.