ADVERTISEMENT

ಮಾಯಾವತಿ, ಮಲ್ಲಿಕಾರ್ಜುನ ಖರ್ಗೆಗೆ ನಿಂದನೆ: ಮೋದಿ ಬೆಂಬಲಿಗ ಬಂಧನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 13:07 IST
Last Updated 4 ಅಕ್ಟೋಬರ್ 2019, 13:07 IST
ಅನಿಲ ಶಾಂತಪ್ಪ ಮಲಘಾಣ
ಅನಿಲ ಶಾಂತಪ್ಪ ಮಲಘಾಣ   

ಕಲಬುರ್ಗಿ: ಬಿಎಸ್ಪಿ ಅಧಿನಾಯಕಿ ಮಾಯಾವತಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನರೇಂದ್ರ ಮೋದಿ ಅವರ ಬೆಂಬಲಿಗನನ್ನು ಜಿಲ್ಲೆಯ ಅಫಜಲಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ಅನಿಲ ಶಾಂತಪ್ಪ ಮಲಘಾಣ ಬಂಧಿತ ಯುವಕ. ಹಾಸನದ ಹೋಟೆಲೊಂದರಲ್ಲಿ ವೇಟರ್‌ ಆಗಿ ಕೆಲಸ ಮಾಡುತ್ತಿರುವ ಯುವಕ ಈ ವಿಡಿಯೊ ಮಾಡಿ ವಾಟ್ಸ್‌ ಆ್ಯಪ್‌ ಗುಂಪುಗಳಿಗೆ ಹರಿಬಿಟ್ಟಿದ್ದ. ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಧಿಯನ್ನು ರದ್ದುಗೊಳಿಸಿದ ಮೋದಿ ಅವರ ಕ್ರಮವನ್ನು ಟೀಕಿಸಿದ್ದಕ್ಕಾಗಿ ಮಾಯಾವತಿ, ಖರ್ಗೆ, ಮಮತಾ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ವೈಯಕ್ತಿಕ ನಿಂದನೆಗಳನ್ನು ಮಾಡಿದ್ದಾನೆ.

‘ವಿಡಿಯೊದಲ್ಲಿ ಮೋದಿ ಅವರ ನಿಲುವನ್ನು ಸಮರ್ಥಿಸಿಕೊಂಡಿರುವ ಯುವಕ, ವಿರೋಧ ಪಕ್ಷದ ನಾಯಕರ ವಿರುದ್ಧ ಅತ್ಯಂತ ಕೊಳಕು ಭಾಷೆಯಲ್ಲಿ ನಿಂದಿಸಿದ್ದಾನೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ)ಯ ಅಫಜಲಪುರದ ತಾಲ್ಲೂಕು ಘಟಕದ ಸಂಚಾಲಕ ರಾಜು ಆರೇಕರ್ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ದೂರನ್ನು ಆಧರಿಸಿ ಯುವಕನನ್ನು ಬಂಧಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.