ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಆರ್ಎಸ್ಎಸ್ ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್ಗಿಂತಲೂ ಕನಿಷ್ಠ ಎಂದು ಐಟಿ & ಬಿಟಿ ಹಾಗೂ ಗ್ರಾಮಿಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭಾನುವಾರ ನಡೆದ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ ಕಣ್ಣೀರು’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ದೆವ್ವದ ನೆರಳಿನೊಂದಿಗೆ ಜಗಳವಾಡುತ್ತಿದ್ದೇವೆ. ಅದರಿಂದ ಪ್ರಯೋಜನವೇನೂ ಇಲ್ಲ. ಆರ್ಎಸ್ಎಸ್ ದೆವ್ವವಾದರೆ, ಬಿಜೆಪಿ ದೆವ್ವದ ನೆರಳು. ದೆವ್ವದೊಂದಿಗೆ ನೇರವಾಗಿ ಜಗಳವಾಡಿದರೆ ನಮ್ಮ ದೇಶ ಸುಧಾರಣೆ ಆಗಲಿದೆ’ ಎಂದು ಅವರು ಹೇಳಿದರು.
‘ಜೆಡಿಎಸ್ನಿಂದ ಎಸ್ ತೆಗೆಯಬೇಕು. ಯಾಕೆಂದರೆ ಅಲ್ಲಿ ಜಾತ್ಯತೀತ ತತ್ವ ಉಳಿದಿಲ್ಲ. ಬರೀ ಜೆಡಿ ಎಂದು ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಆರ್ಎಸ್ಎಸ್ ಅನ್ನು ನೋಂದಣಿ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ, ಇವತ್ತಲ್ಲ ನಾಳೆ ನೋಂದಣಿ ಆಗುತ್ತದೆ, ಆಗಲೇಬೇಕು. ನಾನೇ ಮಾಡಿಸ್ತೀನಿ’ ಎಂದರು.
‘ಆರ್ಎಸ್ಎಸ್ ಸಂಸ್ಥೆಯಲ್ಲ, ಜನರ ಸಂಘಟನೆಯಂತೆ. ಬೆಂಗಳೂರು ಕ್ಲಬ್ ಕೂಡ ವೈಯಕ್ತಿಕ ಸಂಘಟನೆ. ಅವರು ಕಾನೂನು ಪ್ರಕಾರ ನೋಂದಣಿ ಮಾಡಿ ತೆರಿಗೆ ಪಾವತಿಸುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ಆರ್ಎಸ್ಎಸ್ ದೇಣಿಗೆ ತೆಗೆದುಕೊಳ್ಳುವುದಿಲ್ಲವಂತೆ. ಗುರುದಕ್ಷಿಣೆಯಷ್ಟೇ ತೆಗೆದುಕೊಳ್ಳುವುದಂತೆ. ಹಾಗಾದರೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಉತ್ತರವಿಲ್ಲ. ಗುರು ಯಾರು ಎಂದು ನೋಡಿದರೆ ಅವರ ಧ್ವಜವೇ ಗುರುವಂತೆ. ಧ್ವಜಕ್ಕೆ ಗುರುವಂದನೆ ಸಲ್ಲಿಸುವುದಂತೆ. ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ 2,500ಕ್ಕೂಅಧಿಕ ಸಂಘ ಸಂಸ್ಥೆಗಳೊಂದಿಗೆ ಇವರಿಗೆ ಸಂಪರ್ಕ ಜಾಲವಿದೆ. ನಾವು ತೆರಿಗೆ ಪಾವತಿಸಬೇಕು. ಇವರಿಗೆ ತೆರಿಗೆ ಇಲ್ಲ ಎನ್ನುವುದು ಕಾನೂನಿಗೆ ವಿರುದ್ಧವಾದುದು’ ಎಂದು ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.