ADVERTISEMENT

ಧಾರವಾಡ:‘ಅಗ್ನಿಪಥ’ಕ್ಕೆ ವಿರೋಧ – ಲಘು ಲಾಠಿ ಪ್ರಹಾರ

ಕಲ್ಲು ತೂರಾಟ: ವಾಟ್ಸ್‌ಆ್ಯಪ್ ಗುಂಪು ರಚಿಸಿ ಸಂಘಟಿತರಾದ ಯುವಕರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 20:00 IST
Last Updated 18 ಜೂನ್ 2022, 20:00 IST
ಧಾರವಾಡದ ಜಿಲ್ಲಾ ನ್ಯಾಯಾಲಯ ಬಳಿ ಸೇರಿದ್ದ ಗುಂಪನ್ನು ಚದುರಿಸಿದ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದರು
ಧಾರವಾಡದ ಜಿಲ್ಲಾ ನ್ಯಾಯಾಲಯ ಬಳಿ ಸೇರಿದ್ದ ಗುಂಪನ್ನು ಚದುರಿಸಿದ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದರು   

ಧಾರವಾಡ: ಸೇನಾ ಅಲ್ಪಾವಧಿ ನೇಮ ಕಾತಿ ಯೋಜನೆ ‘ಅಗ್ನಿಪಥ’ ಖಂಡಿಸಿ ಶನಿವಾರ ದಿಢೀರನೆ ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳು, ಉದ್ರಿಕ್ತರಾಗಿ ಘೋಷಣೆ ಕೂಗಿ ಖಾಸಗಿ ಬಸ್‌ಗಳ ಮೇಲೆ ಕಲ್ಲು ತೂರಿದರು. ಅವರ ಮೇಲೆ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ವಾಹನಗಳ ಮೂಲಕ ತಂಡೋಪ ತಂಡವಾಗಿ ಬಂದ ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಲಯದ ಬಳಿಯ ವೃತ್ತದಲ್ಲಿ ಬೆಳಿಗ್ಗೆ ಜಮಾಯಿಸಿದರು.

ಸುಮಾರು 200ಕ್ಕೂ ಹೆಚ್ಚು ಅಭ್ಯರ್ಥಿಗಳು ಇದ್ದರು. ನವಲಗುಂದ, ಅಣ್ಣಿಗೇರಿ ಹಾಗೂ ಇನ್ನಿತರ ಭಾಗಗಳಿಂದ ವಾಹನಗಳ ಮೂಲಕ ಅಭ್ಯರ್ಥಿಗಳು ಬರುತ್ತಲೇ ಇದ್ದರು.

ADVERTISEMENT

‘ಅಗ್ನಿಪಥ’ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಅಭಿಯಾನದ ಭಾಗ ವಾಗಿ ರಚಿಸಿಕೊಂಡಿದ್ದ ವಾಟ್ಸ್‌ಆ್ಯಪ್ ಗುಂಪುಗಳ ಮೂಲಕ ಇವರು ಸಂಘಟಿತ ರಾಗಿದ್ದರು ಎನ್ನಲಾಗಿದೆ.

ಗುಂಪು ಸೇರುತ್ತಿದ್ದುದನ್ನು ಅರಿತ ಪೊಲೀಸರು ತಕ್ಷಣವೇ ಸ್ಥಳದಲ್ಲಿ ಸೇರಿ, ಪ್ರತಿಭಟನಾ ರ‍್ಯಾಲಿ ತಡೆದರು. ಸ್ಥಳದಲ್ಲೇ ಮನವಿ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಆದರೆ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಲು ಅಭ್ಯರ್ಥಿಗಳು ಪಟ್ಟು ಹಿಡಿದರು.ಪೊಲೀಸರು ಇದಕ್ಕೆ ಅವಕಾಶ ನೀಡದಿ ದ್ದಾಗ ಉದ್ರಿಕ್ತರಾಗಿ ಘೋಷಣೆ ಕೂಗಿದರು. ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಿದರು.

ಗುಂಪು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಯುವ ಕರು ಘೋಷಣೆ ಕೂಗುತ್ತಲೇ ಎಲ್‌ಇಎ ಕ್ಯಾಂಟೀನ್‌ ಮಾರ್ಗದಲ್ಲಿ ಓಡಿದರು. ಕೆಲವರು ಪೊಲೀಸ್ ವಶಕ್ಕೆ ಸಿಕ್ಕರು. ಉಳಿದವರು ದಿಕ್ಕಾಪಾಲಾಗಿ ಓಡಿದರು. ದಿಢೀರನೆ ಎದುರಾದ ಪ್ರತಿಭಟನೆ ನಿಯಂತ್ರಿಸಲು ಪೊಲೀಸ್ ಇಲಾಖೆ ಸಿಸಿಬಿ ಹಾಗೂ ಇನ್ನಿತರ ಪೊಲೀಸ್ ವಿಭಾಗಗಳಿಂದ ಪೊಲೀಸರನ್ನು ಕರೆ ಯಿಸಿಕೊಂಡರು.

ಪೊಲೀಸ್ ಆಯುಕ್ತ ಲಾಭೂರಾಮ್ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.