ADVERTISEMENT

ಕೀ ಉತ್ತರದಲ್ಲೇ ತಪ್ಪು; ಉಳಿದ ಬಿಕ್ಕಟ್ಟು

ಪಿಯು ಉಪನ್ಯಾಸಕರ ನೇಮಕಾತಿಗೆ ಕೆಇಎ ಸಿದ್ಧತೆ

ಎಂ.ಜಿ.ಬಾಲಕೃಷ್ಣ
Published 18 ಸೆಪ್ಟೆಂಬರ್ 2019, 20:01 IST
Last Updated 18 ಸೆಪ್ಟೆಂಬರ್ 2019, 20:01 IST
   

ಬೆಂಗಳೂರು:ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗಾಗಿ ನಡೆಸಿದ ಅರ್ಹತಾ ಪರೀಕ್ಷೆ ಬಳಿಕಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿದ್ಧಪಡಿಸಿದ ಕೀ ಉತ್ತರದಲ್ಲೇ ತಪ್ಪುಗಳು ಉಳಿದಿದ್ದು, ನೇಮಕಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳು ಆತಂಕಕ್ಕೆ ಈಡಾಗಿದ್ದಾರೆ.

ಉ‍ಪನ್ಯಾಸಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ನಾಲ್ಕೂವರೆ ವರ್ಷಗಳ ಬಳಿಕ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿದೆ. ಈ ಹೊತ್ತಿನಲ್ಲಿ ಕೀ ಉತ್ತರ ನೀಡುವಲ್ಲಿ ಆಗಿರುವ ಯಡವಟ್ಟು ವಿವಾದಕ್ಕೆ ಕಾರಣವಾಗಿದೆ.

ಕೆಇಎ ಮೂರನೇ ಬಾರಿ ಕೀ ಉತ್ತರ ಪ್ರಕಟಿಸಿದ್ದರೂತಪ್ಪುಗಳು ಉಳಿದಿವೆ. ಇದನ್ನು ಸರಿಪಡಿಸಲು ಕೋರಿ ಕೆಲವು ಅಭ್ಯರ್ಥಿಗಳು ಮೇ ತಿಂಗಳಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಮೊರೆ ಹೋಗಿದ್ದಾರೆ.

ADVERTISEMENT

‘ಕೆಇಎ ಬೇಜವಾಬ್ದಾರಿಯಿಂದ ಪ್ರಶ್ನೆಪತ್ರಿಕೆ ತಯಾರಿಸಿತ್ತು.ದೂರು ಕೊಟ್ಟ ನಂತರವೂ ತಜ್ಞರ ತಂಡ ತಪ್ಪುಸರಿಪಡಿಸಿಲ್ಲ. ಕೀ ಉತ್ತರವೇ ಸರಿ ಎಂದಾದರೆ ಸರಿ ಉತ್ತರ ಬರೆದವರಿಗೆ ಅನ್ಯಾಯ’ ಎಂಬುದು ಅಭ್ಯರ್ಥಿಗಳ ಅಳಲು.

ರಾಜ್ಯಶಾಸ್ತ್ರ ಪ್ರಶ್ನೆಪತ್ರಿಕೆಯ ಎರಡನೇ ಕೀ ಉತ್ತರದಲ್ಲಿ 77 ಬದಲಾವಣೆಗಳು ಆಗಿದ್ದವು! ಅಂದರೆ 23 ಮಾತ್ರ ಸರಿ ಉತ್ತರಗಳಾಗಿದ್ದವು. 3ನೇ ಕೀ ಉತ್ತರ ಪ್ರಕಟವಾದ ಬಳಿಕ ಇತಿಹಾಸದಲ್ಲಿ 16, ಕನ್ನಡದಲ್ಲಿ 10, ರಾಜ್ಯಶಾಸ್ತ್ರದಲ್ಲಿ 8, ಸಮಾಜಶಾಸ್ತ್ರದಲ್ಲಿ 8 ತಪ್ಪುಗಳು ಹಾಗೆಯೇ ಉಳಿದಿವೆ.

‘ತಪ್ಪುಗಳಿದ್ದರೆ ಸರಿಪಡಿಸುತ್ತೇನೆ, ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್ ಹೇಳಿದ್ದಾರೆ.

ಹೀಗಿದೆ ನೋಡಿ ಕೀ ಉತ್ತರ

ಇತಿಹಾಸ: ಮಹಲ್ವಾರಿ ಪದ್ಧತಿಯನ್ನು ಮೊದಲು ಎಲ್ಲಿ ಪ್ರಾರಂಭಿಸಿದರು?–ಆಗ್ರಾ ಮತ್ತು ಔದ್‌ ಸರಿ ಉತ್ತರ. ಆದರೆ ಕೆಇಎ ಪ್ರಕಾರ ಪಂಜಾಬ್‌ ಮತ್ತು ಹರಿಯಾಣ. ಸೂತ್ರ ಕ್ರೀಡಾಂಗ ಎಂಬ ಜೈನ ಕೃತಿಯಲ್ಲಿ ಯಾವ ಕ್ರೀಡೆಯನ್ನು ಉಲ್ಲೇಖಿಸಲಾಗಿದೆ? ಚದುರಂಗ ಸರಿ ಉತ್ತರ. ಕೆಇಎ ಪ್ರಕಾರ ಪಗಡೆ.ಕನ್ನಡ:ಅತಿ ಹೆಚ್ಚು ಶಾಸನಗಳು ದೊರಕಿರುವ ರಾಜ್ಯ ಯಾವುದು–ಕರ್ನಾಟಕ ಸರಿ ಉತ್ತರ. ಕೆಇಎ ಪ್ರಕಾರ ತಮಿಳುನಾಡು–ಕರ್ನಾಟಕ. ಕುಸುಮಬಾಲೆಯಲ್ಲಿ ಹೊಲೆಯರ ಚೆನ್ನ ಮತ್ತು ಕುಸುಮಬಾಲೆಗೆ ಇದ್ದ ಕಳ್ಳಸಂಬಂಧ ಹೇಗೆ ಹೊರಬರುತ್ತದೆ?–ಮಗು ಕಪ್ಪಾಗಿದ್ದರಿಂದ ಸರಿ ಉತ್ತರ, ಕೆಇಎ ಪ್ರಕಾರ ಜೋತಮ್ಮರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.