ADVERTISEMENT

ಮಗನ ಅಂತ್ಯಸಂಸ್ಕಾರ ನಂತರ ಬೆಂಗಳೂರು ಸೇರಿದ ಸೊಸೆ ಮರಳಿ ಬರಲಿಲ್ಲ: ಗುರು ತಾಯಿ ಬೇಸರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 6:44 IST
Last Updated 14 ಫೆಬ್ರುವರಿ 2020, 6:44 IST
   

ಮಂಡ್ಯ:‘ಗುರು ಅಂತ್ಯಸಂಸ್ಕಾರದ ನಂತರ ಕೇವಲ ಒಂದು ತಿಂಗಳು ಮಾತ್ರ ಸೊಸೆ ಕಲಾವತಿ ನಮ್ಮ ಜೊತೆಗೆ ಇದ್ದರು. ನಂತರ ಕೆಲಸಕ್ಕೆ ಆಂತ ಬೆಂಗಳೂರಿಗೆ ಹೋದರು. ಈವರೆಗೂ ಅವರು ಬಂದಿಲ್ಲ’ಹೀಗೆಂದು ಪುಲ್ವಾಮ ದಾಳಿಯ ಹುತಾತ್ಮ ಯೋದ ಎಚ್‌. ಗುರು ಅವರ ತಾಯಿ ಚಿಕ್ಕಹೊಳ್ಳಮ್ಮ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪುಲ್ವಾಮ ದಾಳಿಗೆ ಇಂದು ಒಂದು ವರ್ಷ. ದಾಳಿಯಲ್ಲಿ ಮಂಡ್ಯದ ಯೋಧ ಎಚ್‌. ಗುರು ಅವರೂ ಪ್ರಾಣತ್ಯಾಗ ಮಾಡಿದ್ದರು. ಶುಕ್ರವಾರ ಕುಟುಂಬಸ್ಥರು ಪುಣ್ಯತಿಥಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಗುರು ಅವರ ಪತ್ನಿ ಹೊರತುಪಡಿಸಿ ಕುಟುಂಬಸ್ಥರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತಾಯಿ ಚಿಕ್ಕಹೊಳ್ಳಮ್ಮ, ‘ನಮ್ಮ ಜೊತೆಗೆ ಫೋನ್ ಸಂಪರ್ಕದಲ್ಲಿಯೂ ಸೊಸೆ ಇಲ್ಲ. ಅವರು ಫೋನ್ ಮಾಡಿದ್ದರೆ ನಾನು ಮಾತನಾಡುತ್ತಿದ್ದೆ. ನನಗೆ ಫೋನ್ ಮಾಡಲು ಬರುವುದಿಲ್ಲ. ಅವರು ಯಾಕೆ ದೂರವಾಗಿದ್ದಾರೋ ನನಗೆ ಗೊತ್ತಿಲ್ಲ’ ಎಂದು ಹೇಳಿದರು.

ADVERTISEMENT

ತಮ್ಮಇನ್ನೊಬ್ಬ ಮಗನನ್ನು ಕಲಾವತಿಗೆ ಮದುವೆ ಮಾಡಿಕೊಡುವ ಬಗ್ಗೆ ಕೇಳಿ ಬಂದಿದ್ದ ಊಹಾಪೋಹಗಳ ಕುರಿತು ಮಾತನಾಡಿದ ಚಿಕ್ಕಹೊಳ್ಳಮ್ಮ, ‘ಆ ಬಗ್ಗೆ ನಾವೆಂದೂ ಮಾತನಾಡಿಲ್ಲ. ಅಂದು ಅಂತ್ಯಸಂಸ್ಕಾರಕ್ಕೆ ಬಂದಿದ್ದ ಯಾರೋ ಕೆಲವರು ಆಡಿದ್ದ ಮಾತುಗಳವು. ಮಗ ಸತ್ತ ದುಃಖದಲ್ಲಿದ್ದ ನಾವು ಅಂಥ ವಿಚಾರ ಯೋಜನೆ ಮಾಡಲೂ ಸಾಧ್ಯವಿತ್ತೇ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಗುರು ಸತ್ತು ಒಂದು ವರ್ಷ ಆಯ್ತು ಅಂತ ಇವತ್ತು ಪೂಜೆ ಮಾಡ್ತಿದ್ದೀವಿ. ಪ್ರತಿದಿನ ಅವನು ನೆನಪಗ್ತಾನೆ. ಬೆಳಿಗ್ಗೆ–ರಾತ್ರಿ ಕಣ್ಮುಂದೆ ಇರುತ್ತಾನೆ’ ಎಂದು ಆಕೆ ನೋವು ತೋಡಿಕೊಂಡರು.

ಹಣಕಾಸಿನ ವಿಚಾರವಾಗಿ ಅತ್ತೆ ಹಾಗೂ ಸೊಸೆಯ ನಡುವೆ ಮುನಿಸಿ ಏರ್ಪಟ್ಟಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು. ‘ಆ ರೀತಿಯ ಯಾವುದೇ ಜಗಳ ನಮ್ಮ ನಡುವೆ ಆಗಿಲ್ಲ. ನಮಗೆ ಬಂದಿದ್ದು ನಾವಿಟ್ಟುಕೊಂಡಿದ್ದೇವೆ. ಅವರಿಗೆ ಬಂದಿದ್ದು ಅವರು ತೆಗೆದುಕೊಂಡಿದ್ದಾರೆ,’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.