ADVERTISEMENT

ಮದ್ಯ ಮಾರಾಟದಲ್ಲಿ ಎಡವಿದ ಸರ್ಕಾರ: ಪುಷ್ಪ ಅಮರನಾಥ್ ಆರೋಪ

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 8 ಮೇ 2020, 11:18 IST
Last Updated 8 ಮೇ 2020, 11:18 IST
ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್   

ಬೆಂಗಳೂರು:‘ಮದ್ಯದಂಗಡಿ ತೆರೆಯುವ ವಿಷಯದಲ್ಲಿ ಸರ್ಕಾರ ಎಡವಿದೆ. ಕೆಂಪು ವಲಯದಲ್ಲೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಿದ್ದು ತಪ್ಪು’ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮದ್ಯಪಾನ ನಿಷೇದ ಮಾಡಲು ಮಹಿಳೆಯರು ಸಾಕಷ್ಟು ಪ್ರತಿಭಟನೆ ನಡೆಸಿದ್ದಾರೆ. ಅದು ವ್ಯರ್ಥವಾಗಿದೆ. ಮದ್ಯದ ಅಂಗಡಿ ತೆರದ ಬಳಿಕ ಲಾಕ್‌ಡೌನ್ ಸಂಪೂರ್ಣವಾಗಿ ಜಾರಿಯಾಗುತ್ತಿಲ್ಲ’ ಎಂದರು.

ಸಿದ್ದರಾಮಯ್ಯನವರು ಹಸಿರು ವಲಯದಲ್ಲಿ ಮಾತ್ರ ಮದ್ಯದಂಗಡಿ ತೆರೆಯಲು ಸೂಚಿಸಿದ್ದರು. ಆದರೆ, ಕೆಂಪು ವಲಯದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದಿತ್ತು ಎಂದು ಹೇಳಿದರು.

ADVERTISEMENT

ನೀವು ಅಧಿಕಾರಕ್ಕೆ ಬಂದ ತಕ್ಷಣವೇ ಪೆಟ್ರೋಲ್ ₹ 40 ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದೀರಿ. ಆದರೆ, ನಿಮ್ಮ ಮಾತು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದೀರಾ? ಎಂದು ಪ್ರಶ್ನಿಸಿದರು.

ಗರ್ಭಿಣಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ಎಂದು ನೀಡಿ, ಬಳಿಕ ನೆಗೆಟಿವ್ ಎಂದು ವರದಿ ನೀಡುತ್ತಾರೆ. ಇದರಿಂದ ಆ ಮಹಿಳೆ ಎಷ್ಟು ಮಾನಸಿಕ ಹಿಂಸೆ ಅನುಭವಿಸಿರಬೇಕು. ಈ ಬಗ್ಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರದಲ್ಲಿ ಅಂಗನವಾಡಿ ಕೇಂದ್ರದಲ್ಲಿ ವಿತರಿಸುವ ಆಹಾರ ಸಾಮಗ್ರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಕ್ಕರೆ ಕೊಡುತ್ತಿಲ್ಲ ಎಂದು ಹಲವರು ಹೇಳಿಕೆ ನೀಡುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಸಕ್ಕರೆಯನ್ನು ನೀಡುತ್ತಿದ್ದೇವು. ಈ ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.

ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಶೇ 18 ರಷ್ಟು ಸುಂಕ ಹೆಚ್ಚಿಸಿದ್ದಾರೆ. ಇದರಿಂದ ಮಧ್ಯಮವರ್ಗದ ಕುಟುಂಬದ ಮೇಲೆ ಹೊರೆಯಾಗುತ್ತದೆ. ಕಚ್ಚಾ ತೈಲ ಬ್ಯಾರೆಲ್ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದೆ. ಆದರೆ, ರಾಜ್ಯದಲ್ಲಿ ಇಂಧನ ದರ ಕಡಿಮೆಯಾಗಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯೆ ಜಯಮಾಲ ಮಾತನಾಡಿ, ‘ಕೊರೊನಾ ಲಾಕ್‌ಡೌನ್ ನಿರ್ವಹಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಸಂಕಷ್ಟಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ರಾಜಕಾರಣ ಅವಶ್ಯಕತೆ ಇಲ್ಲ. ನಿಮ್ಮ ಪ್ರಚಾರಕ್ಕೆ ಇನ್ನು ಸಮಯ ಇದೆ. ಈ ಸಂದರ್ಭದಲ್ಲಿ ನಿಮ್ಮ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ. ಮಕ್ಕಳಿಗೆ ನೀಡುವ ಆಹಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರಲ್ಲ ಇದು ಸರಿನಾ? ಎಂದು ಪ್ರಶ್ನಿಸಿದರು.

ಅಂಗನವಾಡಿ ಆಹಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.