ADVERTISEMENT

ಚುನಾವಣೆಗೆ 3 ತಿಂಗಳು ಇದ್ದಾಗ ನನ್ನನ್ನು ಗೆಲ್ಲಿಸಿ ಅಂದ್ರೆ ಜನ ಮತ ಹಾಕ್ತಾರಾ ?

ಕೆ.ಬಿ.ಕೋಳಿವಾಡಗೆ ಆರ್. ಶಂಕರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 9:22 IST
Last Updated 19 ಜುಲೈ 2018, 9:22 IST
   

ಬಾಗಲಕೋಟೆ: ನಾಲ್ಕೂವರೆ ವರ್ಷ ಯಾರ ಮನೆಗೂ ಹೋಗದೇ ಕೇವಲ ಮೂರು ತಿಂಗಳಲ್ಲಿ, ಎಲ್ಲರ ಮನೆ ಮನೆಗೆ ಹೋಗಿ ನನ್ನ ಗೆಲ್ಲಿಸಿ ಅಂದ್ರೆ, ಯಾರು ಓಟ್ ಹಾಕ್ತಾರೆ? ಕೆ.ಬಿ.ಕೋಳಿವಾಡ ಯಾರು ಅಂತಲೆ ಜನರಿಗೆ ಗೊತ್ತಿಲ್ಲ, ಆರ್.ಶಂಕರ್ ಅಂದ್ರೆ ಚಿಕ್ಕಮಕ್ಕಳು ಸಹ ಗುರುತಿಸುತ್ತಾರೆ ಎಂದು ಅರಣ್ಯ ಸಚಿವ ಆರ್. ಶಂಕರ್ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಕಾರಣ ಎನ್ನುವ ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೋಳಿವಾಡಗೆ ಮಾಡೋಕೆ ಕೆಲಸ ಇಲ್ಲದೇ ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಈಗಾಗಲೇ ಒಮ್ಮೆ ತರಾಟೆಗೆ ತೆಗೆದುಕೊಳ್ಳಬೇಕಾಗಿದೆ. ಮೋಡ ಬಿತ್ತನೆ ಹಾಗೂ ಮರಳು ಮಾಫಿಯಾದಲ್ಲಿ ಕೋಳಿವಾಡ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ.

ಐದು ವರ್ಷ ಯಾರ ಕಣ್ಣಿಗೆ ಕಾಣದೇ ಚುನಾವಣೆಗೆ ಕೇವಲ 3 ತಿಂಗಳು ಇದ್ದಾಗ ನನಗೆ ಮತ ಹಾಕಿ ಅಂದ್ರೆ ಜನ ಮತ ಹಾಕ್ತಾರಾ ? ಸಿದ್ದರಾಮಯ್ಯ ಹೋದ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ರೆ, ಪ್ರಧಾನಿ ನರೇಂದ್ರ ಮೋದಿ ಹೋದ ಕಡೆ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ. ಅದು ಜನರ ತೀರ್ಮಾನ ಅಷ್ಟೆ ಎಂದರು.

ಇನ್ನು ವಿಷ ಕುಡಿದು ಅಮೃತ ಕೊಟ್ಟಿದ್ದೇನೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿಷ ಕುಡಿದು ಅಮೃತ ಬಂದಿರೊದನ್ನ ನಾವು ನೋಡಿದ್ದೇವೆ. ಆದರೆ ವಿಷ ಕುಡಿಸಿದವರು ಯಾರು ಅಂತ ನಾನು ಹೇಳೋಕೆ ತಯಾರಿಲ್ಲ ಎಂದು ಹೇಳಿದ್ದಾರೆ.

ನಾನು ಪಕ್ಷೇತರ ಶಾಸಕನಾಗಿ ಅವರಿಗೆ ಪೂರ್ಣ ಸಹಕಾರ ಕೊಟ್ಟಿದ್ದೇನೆ. ಆ ಬಗ್ಗೆ ಸಿಎಂ ಅವರೇ ಹೇಳಬೇಕು ಬಾದಾಮಿ ಅಭಿವೃದ್ಧಿ ಬಗ್ಗೆ ಸಿದ್ಧರಾಮಯ್ಯ ಜೊತೆ ಚರ್ಚಿಸಿದ್ದೇನೆ.

ಸರ್ಕಾರ ಸುಭದ್ರವಾಗಿದೆ, ಐದು ವರ್ಷ ನಡೆಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT