ADVERTISEMENT

ಮುಲಾಯಂ ಅಂತ್ಯಕ್ರಿಯೆಗೆ ರಾಹುಲ್ ಗಾಂಧಿ ತೆರಳುವುದಿಲ್ಲ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 2:59 IST
Last Updated 11 ಅಕ್ಟೋಬರ್ 2022, 2:59 IST
ಭಾರತ್ ಜೋಡೊ ಪಾದಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕರು
ಭಾರತ್ ಜೋಡೊ ಪಾದಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕರು   

ಚಿತ್ರದುರ್ಗ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳಲಿದ್ದು, ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಮುಂದುವರಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರದ ಪಾದಯಾತ್ರೆ ಆರಂಭವಾಗುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಮುಲಾಯಂ ಸಿಂಗ್ ಯಾದವ್ ದೊಡ್ಡ ಹೋರಾಟಗಾರ. ಸಮಾಜವಾದಿ ಪಕ್ಷ ಕಟ್ಟಿ ದೇಶದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ರಾಹುಲ್ ಪಾಲ್ಗೊಳ್ಳಬೇಕು ಎಂಬ ಒತ್ತಡವಿತ್ತು. ಈ ಕುರಿತು ರಾತ್ರಿ ಬಹು ಹೊತ್ತು‌ ಚರ್ಚಿಸಲಾಯಿತು. ರಾಹುಲ್ ಇಲ್ಲದೇ ಯಾತ್ರೆ ನಡೆಸುವುದು ಸರಿಯಾಗುವುದಿಲ್ಲ ಎಂದು ಭಾವಿಸಿ ಇಲ್ಲಿಂದಲೇ ಗೌರವ ಸಲ್ಲಿಸುತ್ತಾ ಯಾತ್ರೆ ಮುಂದುವರೆಸಲು ತೀರ್ಮಾನಿಸಲಾಗಿದೆ' ಎಂದು ಮಾಹಿತಿ ನೀಡಿದರು.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅ.17ರಂದು ಚುನಾವಣೆ ನಿಗದಿಯಾಗಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿರುವ ಯಾತ್ರಾರ್ಥಿಗಳು ಮತಚಲಾವಣೆ ಮಾಡಲು ಮಾರ್ಗ ಮಧ್ಯದಲ್ಲಿಯೇ ಮತಗಟ್ಟೆ ಸ್ಥಾಪಿಸಲಾಗುತ್ತದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತ್ತೊಂದು ಮತಗಟ್ಟೆ ತೆರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಪ್ರಮಾಣ ಏರಿಕೆಗೆ ನಿವೃತ್ತ ನ್ಯಾಯಾಮೂರ್ತಿ ನಾಗಮೋಹನದಾಸ್ ಆಯೋಗವನ್ನು ರಚಿಸಿದ್ದು ಕಾಂಗ್ರೆಸ್. ಈ ವೇಳೆಗೆ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕಿತ್ತು. ಬಿಜೆಪಿ ವಿನಾ ಕಾರಣ ವಿಳಂಬ ಮಾಡಿದೆ. ಈ ಹೊತ್ತಿಗೆ ಸಂಸತ್ತಿನ ಅನುಮೋದನೆ ಪಡೆಯಬಹುದಿತ್ತು. ಆಯೋಗದ ವರದಿಯ ತ್ವರಿತ ಅನುಷ್ಠಾನಕ್ಕೆ ಸುಗ್ರೀವಾಜ್ಞೆ ಜಾರಿಗೊಳಿಸಲಿ. ಇದಕ್ಕೆ ಕಾಂಗ್ರೆಸ್ ಬೆಂಬಲ ಇದೆ ಎಂದು ಹೇಳಿದರು.

ಬಿಜೆಪಿ ಇಷ್ಟು ದಿನ ಜನಾಶೀರ್ವಾದ ಪಡೆಯವ ಪ್ರಯತ್ನ ಮಾಡಿತ್ತು. ಈಗ ಜನಸಂಕಲ್ಪ ಮಾಡಲು ಮುಂದಾಗಿದೆ. ಅಧಿಕಾರದಲ್ಲಿದ್ದ ಮೂರು ವರ್ಷದಲ್ಲಿ ಜನರಿಗೆ ಬಿಜೆಪಿ ಯಾವ ಸಂಕಲ್ಪವನ್ನು ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.