ನವದೆಹಲಿ: ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ‘ರೈಲ್ ಆರ್ಕೇಡ್’ ಅನ್ನು ಅಭಿವೃದ್ಧಿಪಡಿಸಲು ರೈಲ್ವೆಯು ಟೆಂಡರ್ ಕರೆದಿದೆ. ರೈಲ್ವೆ ಆರ್ಕೇಡ್ನಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ರೆಸ್ಟೋರೆಂಟ್ಗಳು ಇರಲಿವೆ. ರೈಲು ಪ್ರಯಾಣಿಕರು ಮತ್ತು ನಗರವಾಸಿಗಳೂ ರೈಲ್ವೆ ಆರ್ಕೇಡ್ ಅನ್ನು ಬಳಸಬಹುದು.
ರೈಲ್ವೆಯ ನಿಲ್ದಾಣ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಈ ರೈಲ್ ಆರ್ಕೇಡ್ ಅಭಿವೃದ್ಧಿಪಡಿಸಲಾಗುತ್ತದೆ. ಈ ಕಾರ್ಯಕ್ರಮದ ಅಡಿ ರೈಲು ನಿಲ್ದಾಣಗಳನ್ನು ‘ಮಿನಿಸಿಟಿ’ಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ ವಸತಿ ಪ್ರದೇಶ, ಮಾರುಕಟ್ಟೆ, ಗೇಮ್ಸೆಂಟರ್ಗಳು, ಲಾಡ್ಜಿಂಗ್ ಮತ್ತು ಬೋರ್ಡಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ರೈಲ್ವೆಯು ಮಾಹಿತಿ ನೀಡಿದೆ.
ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮವು ಈ ಅಭಿವೃದ್ಧಿ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಿದೆ. ಈ ಸಂಸ್ಥೆಯೇ ಈಗ ಸಂಗೊಳ್ಳಿ ರಾಯಣ್ಣ ನಿಲ್ದಾಣ ಅಭಿವೃದ್ಧಿಗಾಗಿ ಟೆಂಡರ್ ಕರೆದಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 9.
ವಿಶೇಷಗಳು
15,500 ಚದರ ಅಡಿ ರೈಲ್ ಆರ್ಕೇಡ್ನ ವಿಸ್ತೀರ್ಣ
*ಪ್ರಯಾಣಿಕರು ಮತ್ತು ಪ್ರಯಾಣಿಕೇತರ ನಾಗರಿಕರಿಗಾಗಿ ವಿಶ್ರಾಂತಿ ಮತ್ತು ಮನೋರಂಜನಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
*ಟೆಂಡರ್ ಪಡೆಯುವ ಕಂಪನಿಯೇ ರೈಲ್ ಆರ್ಕೇಡ್ನಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ಗಳ ರೆಸ್ಟೋರೆಂಟ್ಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು
*ಪ್ರತಿಷ್ಠಿತ ಬ್ರ್ಯಾಂಡ್ಗಳ ಗ್ರಾಹಕ ವಸ್ತುಗಳ ಮಳಿಗೆಗಳನ್ನು ಈ ಆರ್ಕೇಡ್ನಲ್ಲಿ ಆರಂಭಿಸಲಾಗುತ್ತದೆ
*ಉಡುಗೊರೆ ಅಂಗಡಿಗಳು, ಕರಕುಶಲ ವಸ್ತುಗಳ ಮಳಿಗೆಗಳು, ದಿನಪತ್ರಿಕೆ-ನಿಯತಕಾಲಿಕಗಳ ಮಳಿಗೆ ಆರಂಭಿಸಲಾಗುತ್ತದೆ
*ಈ ಆರ್ಕೇಡ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ
*ಮೊದಲ ಅವಧಿಯಲ್ಲಿ ಒಂಬತ್ತು ವರ್ಷಗಳವರೆಗೆ ಆರ್ಕೇಡ್ ನಡೆಸಲು ಒಂದು ಕಂಪನಿಗೆ ಗುತ್ತಿಗೆ ನೀಡಲಾಗುತ್ತದೆ
ನಿಷೇಧ
*ಆರ್ಕೇಡ್ನಲ್ಲಿನ ರೆಸ್ಟೋರೆಂಟ್ಗಳಲ್ಲಿ ದನದ ಮತ್ತು ಹಂದಿಯ ಮಾಂಸದ ತಿನಿಸುಗಳನ್ನು ಮಾರಾಟ ಮಾಡುವಂತಿಲ್ಲ
*ಆರ್ಕೇಡ್ನಲ್ಲಿ ಕೋಳಿ, ಮೀನು, ಮಾಂಸದ ಅಂಗಡಿಗಳನ್ನು ಆರಂಭಿಸುವಂತಿಲ್ಲ
*ಯಾವುದೇ ರೀತಿಯ ಮದ್ಯವನ್ನು ಮಾರಾಟ ಮಾಡುವಂತಿಲ್ಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.