ಚಳಗೇರಿ (ಹಾವೇರಿ):‘ಉಕ್ರೇನ್ನಲ್ಲಿರುವ ನಮ್ಮ ಮಕ್ಕಳ (ಅಮಿತ್ ವೈಶ್ಯರ ಮತ್ತು ಸುಮನ್ ವೈಶ್ಯರ) ಜೀವಕ್ಕೆ ಅಪಾಯವಿದೆ. ಕೂಡಲೇ ಅವರನ್ನು ತಾಯ್ನಾಡಿಗೆ ಜೀವಂತವಾಗಿ ಕರೆತನ್ನಿ’ ಎಂದು ಅಮಿತ್ ವೈಶ್ಯರ ತಂದೆ ವೆಂಕಟೇಶ ವೈಶ್ಯರ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಕೈ ಮುಗಿದು ಬೇಡಿಕೊಂಡರು.
ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮದಲ್ಲಿರುವ ಮೃತ ನವೀನ ಗ್ಯಾನಗೌಡರ್ ಮನೆಗೆ ಬುಧವಾರ ಭೇಟಿ ನೀಡಿದ್ದ ಪ್ರಲ್ಹಾದ ಜೋಶಿ ಅವರಿಗೆ ಮನವಿ ಮಾಡಿ, ‘ನನ್ನ ಮಗ ಪ್ರತಿಭಾವಂತ ವಿದ್ಯಾರ್ಥಿ. ನಮ್ಮಲ್ಲಿ ಎಂಬಿಬಿಎಸ್ ಸೀಟಿಗೆ ದುಬಾರಿ ಹಣ ಕೇಳಿದರು. ಆ ಹಣ ಕಟ್ಟಲು ಸಾಧ್ಯವಾಗದೆ ಮಗನನ್ನು (ಅಮಿತ್ ವೈಶ್ಯರ) ಉಕ್ರೇನ್ಗೆ ಕಳುಹಿಸಬೇಕಾಯಿತು. ಇಲ್ಲಿ ಒಬ್ಬೊಬ್ಬ ಸಚಿವನಿಗೆ ಒಂದೊಂದು ಕಾಲೇಜು ಇದೆ. ಅವರು ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಸಿದ ಜೋಶಿ, ‘ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ನಂತರ ಅವರ ಶಿಕ್ಷಣ ಮುಂದುವರಿಕೆ ಕುರಿತಂತೆ ಸಕಾರಾತ್ಮಕ ಚಿಂತನೆ ಮಾಡಲಾಗುವುದು. ಇದು ಪಾಲಿಸಿ ವಿಷಯವಾಗಿರುವುದರಿಂದ ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಭರವಸೆ ನೀಡಿದರು.
ಭಾರತೀಯರ ರಕ್ಷಣೆಗೆ ತೀವ್ರ ಪ್ರಯತ್ನ: (ನವದೆಹಲಿ ವರದಿ)
ಹಾರ್ಕಿವ್, ಸುಮಿ ಸೇರಿ ಪೂರ್ವ ಉಕ್ರೇನ್ನ ವಿವಿಧೆಡೆ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಕುರಿತಂತೆ ಭಾರತೀಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ರಷ್ಯಾ ತಿಳಿಸಿದೆ.
ರಷ್ಯಾದ ಮೂಲಕ ‘ಮಾನವೀಯ ಕಾರಿಡಾರ್’ ನಿರ್ಮಾಣಕ್ಕೆ ಗಂಭೀರ ಯತ್ನ ನಡೆಸುತ್ತಿರುವುದಾಗಿ ರಷ್ಯಾದ ನಿಯೋಜಿತ ರಾಯಭಾರಿ ಡೆನಿಸ್ ಅಲಿಪೊವ್ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.