ADVERTISEMENT

ತಮಿಳುನಾಡಿಗೆ ಕೊಡಗಿನ ನೀರು ಬೇಕು,ಪರಿಹಾರ ಮಾತ್ರ ನೀಡಿಲ್ಲ: ಸಿಎಂಗೆ ಭೈರಪ್ಪ ಪತ್ರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 9:37 IST
Last Updated 15 ನವೆಂಬರ್ 2018, 9:37 IST
   

ಬೆಂಗಳೂರು: ‘ಕೊಡಗಿನಲ್ಲಿ ಮಳೆ ಬಂದರೆ ಹೆಚ್ಚು ನೀರು ಬಿಡಿ ಎಂದು ತಮಿಳುನಾಡಿನವರು ಕರ್ನಾಟಕವನ್ನು ಒತ್ತಾಯಿಸುತ್ತಾರೆ. ನ್ಯಾಯಾಲಯದ ಮೊರೆ ಹೋಗುತ್ತಾರೆ. ಕೊಡಗಿನಲ್ಲಿರುವ ಕಾಡುಗಳಿಂದಾಗಿ ಮಳೆ ಸುರಿಯುತ್ತದೆ. ಕಾವೇರಿ ನದಿ ಹರಿಯುತ್ತದೆ. ಆದರೆ ಅಲ್ಲಿ ಅನಾಹುತ ಸಂಭವಿಸಿದಾಗ ನೆರವು ನೀಡಲು ತಮಿಳುನಾಡು ಸರ್ಕಾರ ಮುಂದೆ ಬರಲಿಲ್ಲ. ಇದನ್ನು ಕೇಂದ್ರ ಹಾಗೂ ನ್ಯಾಯಾಧಿಕರಣದ ಗಮನಕ್ಕೆ ತರುವುದುಅಗತ್ಯ’ ಎಂದು ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ,ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅನೇಕರು ಸಹಾಯ ಮಾಡಿದ್ದಾರೆ. ಆದರೆ ಪ್ರತಿ ಬಾರಿ ರಾಜ್ಯದ ನೀರಿನ ಪರಿಸ್ಥಿತಿಯನ್ನು ಬದಿಗಿಟ್ಟು, ಕಾದುಕುಳಿತ ಮಾದರಿಯಲ್ಲಿ ತಗಾದೆ ತೆಗೆದು ತಮಿಳುನಾಡು ನೀರು ಕಬಳಿಸುತ್ತಲೇ ಇದೆ. ಜತೆಗೆ, ಕೇಂದ್ರ ಹಾಗೂ ನ್ಯಾಯಾಲಯಗಳನ್ನೂ ಒತ್ತಾಯಿಸುವ ಕೆಲಸಕ್ಕೂ ತಮಿಳುನಾಡು ಮುಂದಿರುತ್ತದೆ ಎಂದು ವಿವರಿಸಿದ್ದಾರೆ.

ಕೊಡಗಿನ ನೀರು ಬೇಕಾಗುವ ತಮಿಳುನಾಡಿಗೆ. ಅಲ್ಲಿ ಆಗಿರುವ ಹಾನಿ ತುಂಬುವುದರಲ್ಲಿ ತನ್ನ ಕರ್ತವ್ಯವೇ ಇಲ್ಲ ಎಂಬಂತಿದೆ. ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವುದು ರಾಜ್ಯದ ಕರ್ತವ್ಯ. ಆದರೆ ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದು.

ADVERTISEMENT

ಈ ಕುರಿತು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕಾಗಲಿ ಅಥವಾ ನ್ಯಾಯಾಧಿಕರಣದಲ್ಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.