ADVERTISEMENT

ಎಂಜಿನಿಯರ್ ಆಗಬೇಕಿದ್ದ ಚಂದ್ರಶೇಖರ್ ಗುರೂಜಿ ಸರಳ ವಾಸ್ತು ತಜ್ಞರಾಗಿದ್ದು ಹೇಗೆ?

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 10:38 IST
Last Updated 5 ಜುಲೈ 2022, 10:38 IST
ಚಂದ್ರಶೇಖರ್ ಗುರೂಜಿ
ಚಂದ್ರಶೇಖರ್ ಗುರೂಜಿ   

ಬೆಂಗಳೂರು: ರಾಜ್ಯದ ವಾಸ್ತು ಕ್ಷೇತ್ರದಲ್ಲಿ ಹೆಸರುಗಳಿಸಿದ್ದ ಬಾಗಲಕೋಟೆ ಮೂಲದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ದುಷ್ಕರ್ಮಿಗಳು ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಮಂಗಳವಾರ ಮಧ್ಯಾಹ್ನಭೀಕರವಾಗಿ ಹತ್ಯೆ ಮಾಡಿದ್ದಾರೆ.

‘ಸರಳ ವಾಸ್ತು’ ಎನ್ನುವ ಪರಿಕಲ್ಪನೆಯೊಂದಿಗೆ ಸಾಕಷ್ಟು ಜನಮನ್ನಣೆ ಗಳಿಸಿದ್ದ ಚಂದ್ರಶೇಖರ್ ಗುರೂಜಿ ಹೀಗೆ ಹತ್ಯೆಯಾಗಿದ್ದು ವಾಸ್ತುಪ್ರಿಯರಲ್ಲಿ ಹಾಗೂ ಅವರ ಅಭಿಮಾನಿಗಳಿಗೆ ಬಹುದೊಡ್ಡ ಆಶ್ಚರ್ಯವನ್ನು ತಂದಿದೆ.

ಚಂದ್ರಶೇಖರ್ ಗುರೂಜಿ ಯಾರು?

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಮೂಲತಃ ಬಾಗಲಕೋಟೆ ನಗರದ ಮೋಟಗಿ ಗಲ್ಲಿಯ ನಿವಾಸಿಯಾಗಿದ್ದರು.ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಿವಾಸ ಹೊಂದಿದ್ದರು.

ಮೋಟಗಿ ಗಲ್ಲಿಯ ವಿರೂಪಾಕ್ಷಪ್ಪ ಅಂಗಡಿ, ನೀಲವ್ವ‌ ಅಂಗಡಿಯವರ ಪುತ್ರನಾಗಿದ್ದ ಗುರೂಜಿ, ಆರು ಮಂದಿ ಮಕ್ಕಳಲ್ಲಿ ಚಂದ್ರಶೇಖರ ಮೂರನೇಯವರಾಗಿದ್ದರು.

ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿನೌಕರಿ ಅರಸಿ ಅವರು ಮೂರೂವರೆ ದಶಕಗಳ ಹಿಂದೆ ಮುಂಬಯಿಗೆ ತೆರಳಿದ್ದರು. ಆರಂಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಅವರು, ನಂತರ ಸರಳ ವಾಸ್ತು ಆರಂಭಿಸಿದ್ದರು. ಮುಂಬಯಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದರು.

ಗುರೂಜಿ ಅವರ ಮೊದಲ ಪತ್ನಿ ನಿಧನರಾಗಿದ್ದಾರೆ. ಅವರಿಗೆ ಒಬ್ಬರು ಮಗಳಿದ್ದಾರೆ. ಇನ್ನೊಬ್ಬ ಪತ್ನಿ ಕೂಡ ಇದ್ದು ಅವರಿಗೆ ಮಕ್ಕಳಿಲ್ಲ.

ಸರಳ ವಾಸ್ತು ಪ್ರವರ್ಧಮಾನಕ್ಕೆ ಬಂದ ನಂತರ ವಾಸ್ತುಪ್ರಿಯರಲ್ಲಿ ಜನಪ್ರಿಯತೆ ಗಳಿಸಿದ್ದ ಇವರು, ಒಬ್ಬ ಸ್ಟಾರ್ ವಾಸ್ತು ತಜ್ಞ ಎನ್ನಲಾಗುತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.