ADVERTISEMENT

ಮಸೂದೆಗೆ ಲೋಕಸಭೆ ಅಂಗೀಕಾರ: ಪರಿಶಿಷ್ಟ ಪಂಗಡಕ್ಕೆ ‘ಸಿದ್ದಿ’, ‘ತಳವಾರ’, ‘ಪರಿವಾರ’

ಸಿದ್ದಯ್ಯ ಹಿರೇಮಠ
Published 11 ಫೆಬ್ರುವರಿ 2020, 11:41 IST
Last Updated 11 ಫೆಬ್ರುವರಿ 2020, 11:41 IST
   

ನವದೆಹಲಿ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ‘ಪರಿವಾರ’, ‘ತಳವಾರ’ ಮತ್ತು ‘ಸಿದ್ದಿ’ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ ( 2ನೇ ತಿದ್ದುಪಡಿ) ಮಸೂದೆಗೆ ಲೋಕಸಭೆ ಮಂಗಳವಾರ ಅಂಗೀಕಾರ ನೀಡಿತು.

ಕಳೆದ ಡಿಸೆಂಬರ್‌ 12ರಂದು ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರೆತಿತ್ತು.

ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿರುವ ‘ತಳವಾರ’, ‘ಪರಿವಾರ’ ಸಮುದಾಯ ಹಾಗೂ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಿದ್ದಿ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳು ದೊರೆಯಲು ಈ ಮಸೂದೆ ನೆರವಾಗಲಿದೆ.

ADVERTISEMENT

ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್‌ ಮುಂಡಾ ಮಸೂದೆ ಮಂಡಿಸಿದರು. ವಿಪಕ್ಷಗಳ ಸದಸ್ಯರೂ ಮಸೂದೆಯನ್ನು ಸ್ವಾಗತಿಸಿದರು.

ಬಜೆಟ್‌ ಅಧಿವೇಶನದ ಮೊದಲ ಹಂತದ ಕೊನೆಯ ದಿನ ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದ್ದು, ಇನ್ನು ರಾಷ್ಟ್ರಪತಿಯವರ ಅನುಮೋದನೆ ಬಾಕಿ ಇದೆ.

ಮಸೂದೆ ಕುರಿತು ಕನ್ನಡದಲ್ಲೇ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ ಸಿಂಹ, ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಈ ಸಮುದಾಯದ ಜನರು 36 ವರ್ಷಗಳ ಹಿಂದೆ ಸಲ್ಲಿಸಿದ್ದ ಬೇಡಿಕೆ ಇದೀಗ ಈಡೇರುತ್ತಿದೆ. ಈ ನಿಟ್ಟಿನಲ್ಲಿ ಅನೇಕರು ಹೋರಾಟ ನಡೆಸಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ, ರಾಜ್ಯ ಸಚಿವ ಸಂಪುಟದ ಒಪ್ಪಿಗೆ ನೀಡಿ ಸಂಸತ್‌ಗೆ ಕಳುಹಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದರೆಲ್ಲರೂ ಅಭಿನಂದನೆಗೆ ಅರ್ಹರು ಎಂದು ಹೇಳಿದರು.

ಸಂಸದರಾದ ಸುಪ್ರಿಯಾ ಸುಳೆ, ಸೌಗತ್‌ ರಾಯ್‌, ನಿಶಿಕಾಂತ್‌ ದುಬೆ, ಎನ್‌.ಕೆ. ಪ್ರೇಮಚಂದ್ರನ್‌, ಅರವಿಂದ ಸಾವಂತ್‌, ಕೆ.ಸುರೇಶ್‌, ಅನುಭವ್‌ ಮೊಹಾಂತಿ ಮಸೂದೆ ಕುರಿತು ಮಾತನಾಡಿ, ವಿವಿಧ ರಾಜ್ಯಗಳಲ್ಲಿ ಬೇರೆ ಹೆಸರುಗಳಿಂದ ಕರೆಯಲಾಗುವ ಇದೇ ಸಮುದಾಯದವರನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.