ADVERTISEMENT

ರಾಯರಿಗೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 12:43 IST
Last Updated 17 ಆಗಸ್ಟ್ 2019, 12:43 IST
ರಾಯರ ಮಧ್ಯಾರಾಧನೆ ನಿಮಿತ್ತ ತಿರುಪತಿ ತಿರುಮಲದಿಂದ  ಆಗಮಿಸಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬರಮಾಡಿಕೊಂಡರುಪ್ರಜಾವಾಣಿ ಚಿತ್ರ: ಶ್ರೀನಿವಾಸ ಇನಾಮದಾರ್‌
ರಾಯರ ಮಧ್ಯಾರಾಧನೆ ನಿಮಿತ್ತ ತಿರುಪತಿ ತಿರುಮಲದಿಂದ  ಆಗಮಿಸಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬರಮಾಡಿಕೊಂಡರುಪ್ರಜಾವಾಣಿ ಚಿತ್ರ: ಶ್ರೀನಿವಾಸ ಇನಾಮದಾರ್‌   

ಮಂತ್ರಾಲಯ: ಕಾಮಧೇನು ಕಲ್ಪವೃಕ್ಷ ಶ್ರೀ ಗುರು ಸಾರ್ವಭೌಮರ 348ನೇ ಆರಾಧನಾ ಮಹೋತ್ಸವವು ಸಂಭ್ರಮ, ಸಡಗರದೊಂದಿಗೆ ನಡೆಯುತ್ತಿದ್ದು, ಶನಿವಾರ ಮಧ್ಯಾರಾಧನೆಯಂದು ವಿಶೇಷ ಪೂಜಾ ವಿಧಿ ವಿಧಾನಗಳು ಜರಗಿದವು.

ತಿರುಪತಿ ತಿರುಮಲದಿಂದ ತರಲಾಗಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ವಾಧ್ಯವೈಭವ, ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಟಿಟಿಡಿ ಆಡಳಿತಾಧಿಕಾರಿಯು ಶೇಷವಸ್ತ್ರವನ್ನು ತಲೆ ಮೇಲೆ ಹೊತ್ತು ಮಠದ ಪ್ರಕಾರದಲ್ಲಿ ಪ್ರದಕ್ಷಣೆ ಮಾಡಿದರು. ಆನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷವಸ್ತ್ರವನ್ನು ಬರಮಾಡಿಕೊಂಡು, ತಲೆಮೇಲಿಟ್ಟುಕೊಂಡು ರಾಯರ ಸನ್ನಿಧಿಗೆ ತೆಗೆದುಕೊಂಡು ಹೋದರು.

ಮೂಲವೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ, ಫಲ, ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಮಠದೊಳಗೆ ಹಾಗೂ ಮಠದ ಪ್ರಾಕಾರದಲ್ಲಿ ಭಕ್ತಸಮೂಹವು ಕುಳಿತು ಅಭಿಷೇಕ ನೆರವೇರಿಸುವ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡರು. ಸುವರ್ಣ ರಥದಲ್ಲಿ ರಾಯರ ಪ್ರಭಾವಳಿಯನ್ನಿರಿಸಿ ಪ್ರಾಕಾರದಲ್ಲಿ ರಥೋತ್ಸವ ನಡೆಸಲಾಯಿತು. ಚಂಡಿ, ಮದ್ದಳೆ ವಾದ್ಯ ವೈಭವವು ಆರಾಧನಾ ಮಹೋತ್ಸವದ ಸಂಭ್ರಮವನ್ನು ಹೆಚ್ಚಿಸಿವೆ.

ADVERTISEMENT

ನಾಡಿನ ವಿವಿಧೆಡೆಯಿಂದ ಭಕ್ತರು ರಾಯರ ದರ್ಶನಕ್ಕಾಗಿ ನಿರಂತರವಾಗಿ ಬರುತ್ತಿದ್ದಾರೆ. ಚಲನಚಿತ್ರ ನಟರಾದ ಜಗ್ಗೇಶ್‌ ಹಾಗೂ ಕೋಮಲ್‌ ಅವರು ರಾಯರ ದರ್ಶನ ಪಡೆದರು.

ಮಹಾರಥೋತ್ಸವ ನಾಳೆ:ರಾಯರ ಆರಾಧನಾ ಮಹೋತ್ಸವದ ಉತ್ತರಾರಾಧನೆ ದಿನದಂದು ಭಾನುವಾರ ಮಹಾರಥೋತ್ಸವ ನಡೆಯುವುದು.

ಮಠದಿಂದ ಮುಖ್ಯರಸ್ತೆವರೆಗೂ ರಥೋತ್ಸವ ಸಾಗಲಿದ್ದು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.