
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಹಂಚಿಕೆಯಾದ ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ 10 ತಿಂಗಳಿನಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.
ಸರ್ಕಾರಿ ನೌಕರರು ಮೃತಪಟ್ಟಾಗ ಅವರ ಕುಟುಂಬದ ಸದಸ್ಯರಿಗೆ ನಿಯಮದಂತೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು. ನೌಕರರು ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿರುತ್ತಾರೆಯೋ, ಆ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ಮಾತೃ ಇಲಾಖೆಯಲ್ಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದಿದ್ದರೆ ಅರ್ಜಿಗಳನ್ನು ಆಯಾ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಲಾಗುತ್ತದೆ. ಅರ್ಜಿಗಳ ಸಂಖ್ಯೆ, ವಿದ್ಯಾರ್ಹತೆಗೆ ಅನುಗಣವಾಗಿ ಖಾಲಿ ಹುದ್ದೆಗಳ ಆಧಾರದಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗುತ್ತದೆ.
ಆಯಾ ಇಲಾಖೆಗಳು ಹಂಚಿಕೆಯಾದ ಅಭ್ಯರ್ಥಿಗಳ ನೈಜತೆ, ದಾಖಲೆಗಳನ್ನು ಪರಿಶೀಲಿಸಿದ ನಂತರ ನೇಮಕಾತಿ ಆದೇಶ ನೀಡುತ್ತವೆ. ವಿವಿಧ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್ ನೀಡಿದ ಆದೇಶದಂತೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ ಮೂರು ತಿಂಗಳ ಒಳಗೆ ನೇಮಕಾತಿ ಆದೇಶ ನೀಡಬೇಕು. ಇದೇ ವರ್ಷದ ಆರಂಭದಲ್ಲಿ ಹಂಚಿಕೆಯಾಗಿದ್ದ ಅಭ್ಯರ್ಥಿಗಳಿಗೆ ಉಳಿದ ಇಲಾಖೆಗಳು ಕಾಲಮಿತಿಯ ಒಳಗೆ ನೇಮಕಾತಿ ಆದೇಶ ನೀಡಿವೆ. ಆದರೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ವಿಳಂಬ ಮಾಡಿದ್ದು, 37 ಅಭ್ಯರ್ಥಿಗಳು ನಿತ್ಯವೂ ಬೆಂಗಳೂರಿನ ಕಚೇರಿಗೆ ಅಲೆದಾಡುತ್ತಿದ್ದಾರೆ.
‘ಆದಾಯದ ಮೂಲವಾಗಿದ್ದ ಪೋಷಕರನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಮೃತ ನೌಕರರ ಕುಟುಂಬದ ಸದಸ್ಯರು ಆದೇಶದ ಪ್ರತಿ ಪಡೆಯಲು ನಿತ್ಯವೂ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಎಲ್ಲ ಪ್ರಕ್ರಿಯೆ ಮುಗಿದಿದ್ದರೂ ವಿಳಂಬಕ್ಕೆ ಕಾರಣ ಸಿಗುತ್ತಿಲ್ಲ. ನಮ್ಮ ಜತೆಗೆ ಅರ್ಜಿ ಸಲ್ಲಿಸಿ, ಇತರೆ ಇಲಾಖೆಗಳಿಗೆ ಹಂಚಿಕೆಯಾದವರು ನೇಮಕಾತಿ ಆದೇಶ ಪಡೆದುಕೊಂಡು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿಳಂಬ ನೀತಿ ಸರಿಯಲ್ಲ’ ಎನ್ನುತ್ತಾರೆ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.