ADVERTISEMENT

ನೋಂದಣಿ–ಮುದ್ರಾಂಕ ಆದಾಯ ಏರಿಕೆ: ಆರು ತಿಂಗಳಲ್ಲಿ ₹ 6,764 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 11:31 IST
Last Updated 5 ಸೆಪ್ಟೆಂಬರ್ 2022, 11:31 IST
ಕಂದಾಯ ಸಚಿವ ಆರ್‌.ಅಶೋಕ
ಕಂದಾಯ ಸಚಿವ ಆರ್‌.ಅಶೋಕ   

ಬೆಂಗಳೂರು: ಈ ಸಾಲಿನಲ್ಲಿ (2022–23) ನೋಂದಣಿ ಮತ್ತು ಮುದ್ರಾಂಕದಲ್ಲಿ ಶೇ 10 ರಷ್ಟು ರಿಯಾಯಿತಿ ಪ್ರಕಟಿಸಿದ್ದರಿಂದ ನೋಂದಣಿ ಮತ್ತು ಆದಾಯದಲ್ಲಿ ಭಾರಿ ಏರಿಕೆ ಆಗಿದೆ. ಏಪ್ರಿಲ್‌ನಿಂದ– ಸೆಪ್ಟೆಂಬರ್‌(4) ವರೆಗೆ ಒಟ್ಟು 11,08,129 ದಾಖಲೆಪತ್ರಗಳು ನೋಂದಣಿ ಆಗಿದ್ದು, ₹6,764 ಕೋಟಿ ಆದಾಯ ಸಂಗ್ರಹವಾಗಿದೆ.

ಕಂದಾಯ ಸಚಿವ ಆರ್‌.ಅಶೋಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಆರು ತಿಂಗಳ ಅವಧಿಗೆ ₹5,647.68 ಕೋಟಿ ಆದಾಯದ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಆದರೆ ₹1,117.03 ಕೋಟಿ ಹೆಚ್ಚು ಆದಾಯ ಸಂಗ್ರಹವಾಗಿದೆ ಎಂದು ಅವರು ಹೇಳಿದರು.

ಶೇ 10 ರಷ್ಟು ರಿಯಾಯಿತಿಯನ್ನು ಇನ್ನೂ ಮೂರು ತಿಂಗಳು ಅವಧಿಗೆ ವಿಸ್ತರಿಸಲು ಸದ್ಯವೇ ಆದೇಶ ಮಾಡಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಅಲ್ಲದೆ, ಇದೇ ತಿಂಗಳು ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಭೂಪರಿವರ್ತನೆ‌ ಸರಳೀಕರಣಗೊಳಿಸುವ ಮಸೂದೆ ಮಂಡಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಅಲೆದಾಟ ಹಾಗೂ ಮಧ್ಯವರ್ತಿಗಳ ಕಾಟದಿಂದ ಬಿಡುಗಡೆ ಸಿಗಲಿದೆ ಎಂದು ಅಶೋಕ ಹೇಳಿದರು.

ಹಾಸನ, ಚಿಕ್ಕಮಗಳೂರು ಮುಂತಾದ ಕಡೆ ಕಾಫಿ ಬೆಳೆಗಾರರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದರಿಂದಾಗಿ ರೈತರು ಮತ್ತು ಅಧಿಕಾರಿಗಳ ಮಧ್ಯೆ ನಿರಂತರ ಜಟಾಪಟಿ ಮುಂದುವರಿದಿದೆ. ಇದಕ್ಕೆ ಅಂತ್ಯ ಹಾಡಲು, ರೈತರಿಗೆ ಮಾತ್ರ 30 ವರ್ಷಕ್ಕೆ ಲೀಸ್ ಆಧಾರದಲ್ಲಿ ನೀಡಲು ಮಸೂದೆ ಮಂಡಿಸುತ್ತೇನೆ. ಇದರಿಂದಾಗಿ ರೈತರಿಗೂ ವಿವಿಧ ಸೌಲಭ್ಯ ಪಡೆಯಲು ಅನುಕೂಲ ವಾಗಲಿದೆ, ಸರ್ಕಾರಕ್ಕೂ ಆದಾಯ ಬರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.