ADVERTISEMENT

ಟ್ರ್ಯಾಕ್ಟರ್‌ ರ‍್ಯಾಲಿಯನ್ನು ಕೈಬಿಡಿ: ರೈತರಿಗೆ ಸಚಿವ ಬಿ.ಸಿ. ಪಾಟೀಲ ಮನವಿ

ರೈತರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಮನವಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:43 IST
Last Updated 25 ಜನವರಿ 2021, 16:43 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಬೆಂಗಳೂರು: ‘ರೈತರ ಬಲವರ್ಧನೆಗೆ ಮತ್ತು ಆದಾಯ ಹೆಚ್ಚಿಸಲು ಕೃಷಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಹೀಗಾಗಿ, ರೈತರು ‌ಟ್ರ್ಯಾಕ್ಟರ್ ರ‍್ಯಾಲಿ ಪ್ರತಿಭಟನೆ ಕೈಬಿಡಬೇಕು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿದ್ದು, ಇದರಲ್ಲಿ ಯಾವುದೇ ಸಂಶಯಬೇಡ. ಈ ಬಗ್ಗೆ ಈಗಾಗಲೇ ಮನವರಿಕೆ ಮಾಡಿಕೊಡಲಾಗಿದೆ’ ಎಂದರು.

‘ಎಪಿಎಂಸಿ ರದ್ದುಪಡಿಸಿ, ಬೆಂಬಲ ಬೆಲೆ ರದ್ದುಪಡಿಸಲಾಗುವುದು ಎಂದು ಕಾಂಗ್ರೆಸ್ 2019ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೇ ಹೇಳಿತ್ತು. ರೈತರ ವಿಚಾರದಲ್ಲಿ ಕಾಂಗ್ರೆಸ್‌ ದ್ವಂದ್ವ ನೀತಿ ಹೊಂದಿದೆ. ತನ್ನ ಅಸ್ತಿತ್ವ ಉಳಿಸಿ ಕೊಳ್ಳಲು ಇದೀಗ ಊಸರವಳ್ಳಿ ನಾಟಕವಾಡುತ್ತಿದೆ’ ಎಂದು ದೂರಿದರು.

ADVERTISEMENT

‘ನಾವು ಎಪಿಎಂಸಿ ರದ್ದು ಮಾಡುತ್ತಿಲ್ಲ. ರೈತ ತನ್ನ ಬೆಳೆಯನ್ನು ತನಗೆ ಇಚ್ಛಿಸಿದ ಬೆಲೆಯಲ್ಲಿ ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಕಲ್ಪಿಸಿಕೊಟ್ಟಿದೆ. ಎಪಿಎಂಸಿಯಲ್ಲಿಯೂ ಮಾರಾಟ ಮಾಡಬಹುದಾಗಿದೆ. ಲಾಭ–ನಷ್ಟಕ್ಕೆ ವ್ಯಾಪಾರಸ್ಥರು ಹೊಣೆಯಾಗುತ್ತಾರೆಯೇ ಹೊರತು ರೈತರಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಟ್ರ್ಯಾಕ್ಟರ್ ಜಪ್ತಿ ಮಾಡಿದರೆ ಜೈಲಿಗೆ ಹೋಗಲೂ ಸಿದ್ಧ’

ಮೈಸೂರು:ಟ್ರ್ಯಾಕ್ಟರ್ ಜಪ್ತಿ ಮಾಡಿದರೆ ಜೈಲಿಗೆ ಹೋಗಲೂ ಸಿದ್ಧ: ‘ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಣರಾಜ್ಯೋತ್ಸವ ದಿನ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ರ‍್ಯಾಲಿಗೆ ತಮ್ಮ ಪೂರ್ಣ ಬೆಂಬಲವಿದ್ದು, ರೈತರ ಬೆಂಬಲಕ್ಕೆ ನಿಲ್ಲುವಂತೆ ಕಾಂಗ್ರೆಸ್‌ ರೈತ ವಿಭಾಗಕ್ಕೆ ಸೂಚನೆ ಕೊಟ್ಟಿದ್ದಾಗಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಟ್ರ್ಯಾಕ್ಟರ್ ಜಪ್ತಿ ಮಾಡಿ ಕೇಸು ಹಾಕಿದರೆ ಜೈಲಿಗೆ ಹೋಗಲೂ ಸಿದ್ಧ. ಜೈಲ್‌ ಭರೋ ಶುರು ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ನೋವು ಹೇಳಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ರೈತರ ಬಾಯಿಮುಚ್ಚಿಸುವ ಕೆಲಸ ಆಗಬಾರದು’ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.