ADVERTISEMENT

ವ್ಯವಹಾರದಲ್ಲಿ ನಷ್ಟ: ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 11:06 IST
Last Updated 16 ಆಗಸ್ಟ್ 2019, 11:06 IST
   

ಗುಂಡ್ಲುಪೇಟೆ: ಪಟ್ಟಣದ ಐಟಿಐ ಕಾಲೇಜಿನ ಬಳಿ ಇರುವ ಜಮೀನೊಂದರಲ್ಲಿ ಮೈಸೂರಿನಲ್ಲಿ ಡಾಟಾಬೇಸ್ ಕಂಪನಿ‌ ನಡೆಸುತ್ತಿದ್ದ ನಾಗರಾಜ ಭಟ್ಟಾಚಾರ್ಯ ಹಾಗೂ ಓಂಪ್ರಕಾಶ್ ಭಟ್ಟಾಚಾರ್ಯಅವರ ಕುಟುಂಬ ಮಗು ಸೇರಿದಂತೆ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ನಾಗರಾಜ ಭಟ್ಟಾಚಾರ್ಯ (60), ಹೇಮಾಲತಾ (50), ಓಂಪ್ರಕಾಶ್ ಭಟ್ಟಾಚಾರ್ಯ (35) ನಿಖಿತಾ (28) ಮತ್ತು ಮಗ ಆರ್ಯನ್(4) ಎಂದು ಗುರುತಿಸಲಾಗಿದೆ.

ಮಂಗಳವಾರದಿಂದಲೇ ಪಟ್ಟಣದ ನಂದಿ ರೆಸಿಡೆನ್ಸಿನಲ್ಲಿ ‌ಕುಟುಂಬ ಉಳಿದುಕೊಂಡಿತ್ತು. ಗುರುವಾರ ತಡರಾತ್ರಿ 3 ಗಂಟೆ ಸುಮಾರಿಗೆ ಪಿಸ್ತೂಲ್‌ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಓಂಪ್ರಕಾಶ್ ಭಟ್ಟಾಚಾರ್ಯ ಪತ್ನಿ ನಿಖಿತಾ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಗೊತ್ತಾಗಿದೆ. ಮೈಸೂರಿನ ದಟ್ಟಗಳ್ಳಿಯಲ್ಲಿ ಕುಟುಂಬ ವಾಸವಿತ್ತು.

ಭಟ್ಟಾಚಾರ್ಯ ಹಾಗೂ ಓಂಪ್ರಕಾಶ್ ಅವರು ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿದ್ದರು. ಇದರಲ್ಲಿ ನಷ್ಟವದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

3 ದಿನಗಳ ಹಿಂದೆಯೆ ಮನೆ ಬಿಟ್ಟಿದ್ದ ಕುಟುಂಬ
ಮೈಸೂರು:
ಗುಂಡ್ಲುಪೇಟೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರು ಇಲ್ಲಿನ ತಮ್ಮ ದಟ್ಟಗಳ್ಳಿಯ ನಿವಾಸವನ್ನು ಬೀಗ ಹಾಕಿಕೊಂಡು ಮೂರು ದಿ‌ನಗಳ ಹಿಂದೆಯೆ ತೆರಳಿದ್ದರು ಎಂದು ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದಾರೆ.

ಇಲ್ಲಿ ಇವರ ಸಂಬಂಧಿಕರು ಯಾರೂ ವಾಸವಾಗಿಲ್ಲ. ನೆರೆಹೊರೆಯವರೊಂದಿಗೆ ಈ ಕುಟುಂಬ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಇವರು ನಡೆಸುತ್ತಿದ್ದ ಟಿವಿ ಇನ್ಫೊಟೆಕ್ ಎಂಬ ಉದ್ಯಮ ನಷ್ಟದಲ್ಲಿ ಇತ್ತು. ಸಾಲದ ಹೊರೆ ಇತ್ತು. ಹೀಗಾಗಿ ಕುಟುಂಬದ ನಾಲ್ವರು ಸದಸ್ಯರಿಗೆ ಮೊದಲು ಗುಂಡಿಕ್ಕಿ, ನಂತರ ಓಂಪ್ರಕಾಶ್ ತಮಗೆ ತಾವೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕುಟುಂಬದವರ ಆಕ್ರಂದನ

ಬೌನ್ಸರ್ ಇಟ್ಟುಕೊಂಡಿದ್ದ ಓಂಪ್ರಕಾಶ್​
ಗುಂಡ್ಲುಪೇಟೆಯಲ್ಲಿ ಗುಂಡಿಕ್ಕಿ ಕುಟುಂಬ ಸದಸ್ಯರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಓಂಪ್ರಕಾಶ್ ಅವರು ರಕ್ಷಣೆಗೆ 4 ಮಂದಿ ಬೌನ್ಸರ್‌ಗಳನ್ನು ಇಟ್ಟುಕೊಂಡಿದ್ದರು ಎಂದು ಮನೆಯ ಸಮೀಪದ ನಿವಾಸಿಯೊಬ್ಬರು ತಿಳಿಸಿದರು‌.

ಎರಡು ಪಾಳಿಯಲ್ಲಿ ತಲಾ ಇಬ್ಬರು ಬೌನ್ಸರ್‌ಗಳಂತೆ ಒಟ್ಟು ನಾಲ್ವರು ಬೌನ್ಸರ್‌ಗಳು ರಕ್ಷಣೆಗೆ ಇದ್ದರು. ವಾಕಿಂಗ್‌ಗೆ ಹೋಗುವಾಗಲೂ ಬೌನ್ಸರ್‌ಗಳು ಇರುತ್ತಿದ್ದರು ಎಂದು ಹೇಳಿದ್ದರು.

4 ದಿನದ ಹಿಂದೆಯೆ ಹಾಲು ಬೇಡ ಅಂದಿದ್ದರು
ಓಂಪ್ರಕಾಶ್ ಅವರು 4 ದಿನಗಳ ಹಿಂದೆಯೆ ಹಾಲು ಹಾಕುವುದನ್ನು ಬೇಡ ಎಂದು ಹೇಳಿದ್ದರು. ಎಲ್ಲ ಹಣವನ್ನೂ ನೀಡಿದ್ದರು ಎಂದು ಹಾಲು ಹಾಕುತ್ತಿದ್ದ ಪ್ರಭಾಕರ್ ತಿಳಿಸಿದರು.

ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ಸಾಕಷ್ಟು ಹಣ ನೀಡುತ್ತಿದ್ದರು ಎಂದು ಅವರು ಹೇಳಿದರು‌. ಸೊಪ್ಪು ಮಾರಾಟ ಮಾಡುವ ಮಹಿಳೆಯೊಬ್ಬರಿಗೆ 4 ದಿನಗಳ ಹಿಂದೆಯೆ ಒಂದು ಸಾವಿರ ಹಣ ನೀಡಿದ್ದರು ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಗಣಿ ಉದ್ಯಮ
ಓಂಪ್ರಕಾಶ್ ಅವರು ಗಣಿ ಉದ್ಯಮವೊಂದನ್ನು ನಡೆಸುತ್ತಿದ್ದರು ಎಂದು ನಿವಾಸಿಯೊಬ್ಬರು ಹೇಳಿದರು.

ಸ್ಥಳಕ್ಕೆ ಎಚ್.ಡಿ ಆನಂದ ಕುಮಾರ್ ಎಎಸ್‌ಪಿ ಅನಿತಾ ಹದ್ದಣ್ಣವರ್ ಭೇಟಿ ನೀಡಿ ಪರಿಶೀಲಿಸಿದರು
ಓಂಪ್ರಕಾಶ್ ಅವರು ನಡೆಸುತ್ತಿದ್ದ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.