ADVERTISEMENT

ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಇಲ್ಲ: ಸಚಿವ ವಿ.ಸುನಿಲ್ ಕುಮಾರ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 12:36 IST
Last Updated 13 ಆಗಸ್ಟ್ 2021, 12:36 IST
ವಿ.ಸುನಿಲ್ ಕುಮಾರ್‌
ವಿ.ಸುನಿಲ್ ಕುಮಾರ್‌   

ಬೆಂಗಳೂರು: ರಾಜ್ಯದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಚಿಂತನೆ ಇಲ್ಲ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್‌ ಹೇಳಿದರು.

ಈ ಬಗ್ಗೆ ಊಹಾಪೋಹಗಳನ್ನು ರೈತರು ನಂಬಬಾರದು ಎಂದು ಅವರು ಶುಕ್ರವಾರ ತಮ್ಮ ಕಚೇರಿಯ ಪೂಜೆಯ ಬಳಿಕ ಸುದ್ದಿಗಾರರು ಜತೆ ಮಾತನಾಡಿ ತಿಳಿಸಿದರು.

ಸೌರ ವಿದ್ಯುತ್‌ ಯೋಜನೆಗಳಲ್ಲಿ ಈ ಹಿಂದೆ ನಡೆದಿರುವ ಹಗರಣ ತನಿಖೆ ನಡೆಸಬೇಕು ಎಂದು ವಿಧಾನಸಭೆ ಕಲಾಪದಲ್ಲಿ ಒತ್ತಾಯ ಮಾಡಿದ್ದಕ್ಕೆ ಬದ್ದನಾಗಿದ್ದೇನೆ. ಇಲಾಖೆಯಲ್ಲಿ ಈ ಹಿಂದೆ ಯಾವುದಾದರೂ ತಪ್ಪುಗಳು ಆಗಿದ್ದರೆ, ಅದನ್ನು ಸರಿಪಡಿಸುವ ಮತ್ತು ಸುಧಾರಣೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆಯುತ್ತೇನೆ. ಪ್ರಮಾದಗಳು ಆಗಿದ್ದರೆ ತನಿಖೆ ಸಿದ್ಧ ಎಂದು ಸುನಿಲ್‌ ಹೇಳಿದರು.

ADVERTISEMENT

ರೈತರಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳ ಸಭೆ ಕರೆದು ಸೂಚಿಸಿದ್ದೇನೆ. ಇಲಾಖೆಯ ಆಳ ಮತ್ತು ಅಗಲ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಇಲಾಖೆಯನ್ನು ಜನ ಸ್ನೇಹಿಯಾಗಿಸುವುದು ನಮ್ಮ ಮುಂದಿರುವ ಸವಾಲು ಎಂದೂ ಅವರು ಹೇಳಿದರು.

ಈ ಇಲಾಖೆಯಲ್ಲಿ ಲೈನ್‌ಮನ್‌ಗಳಿಂದ ಹಿಡಿದು ವ್ಯವಸ್ಥಾಪಕ ನಿರ್ದೇಶಕರವರೆಗೆ ಇದ್ದಾರೆ. ಎಲ್ಲ ಹಂತಗಳನ್ನು ಸುಧಾರಣೆ ತಂದು, ಇಲಾಖೆಯನ್ನು ಕ್ರಿಯಾಶೀಲವಾಗಿಸುವ ಬಗ್ಗೆ ಆಲೋಚನೆ ನಡೆಸಿದ್ದೇನೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಎರಡು ಸುತ್ತಿನ ಸಭೆ ನಡೆಸಿರುವುದಾಗಿ ಎಂದು ಸುನಿಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.