ADVERTISEMENT

ಬಿಜೆಪಿ ಸರ್ಕಾರದಲ್ಲೂ ಟೆಲಿಫೋನ್ ಕದ್ದಾಲಿಕೆ: ಜೆಡಿಎಸ್ ವಕ್ತಾರ ರಮೇಶ್ ಬಾಬು ಆರೋಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 8:37 IST
Last Updated 28 ಆಗಸ್ಟ್ 2019, 8:37 IST
   

ಬೆಂಗಳೂರು:ಬಿಜೆಪಿ ಸರ್ಕಾರದಲ್ಲೂ ಟೆಲಿಫೋನ್ ಕದ್ದಾಲಿಕೆ ಆಗುತ್ತಿದೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಆರೋಪಿಸಿದರು.

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಹಾಗೂ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಗುಪ್ತಚರ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ನನಗೂ ಅನಾಮಿಕರೊಬ್ಬರು ಪತ್ರಕರ್ತರ ಹೆಸರಿನಲ್ಲಿ ಕರೆ ಮಾಡಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ದೇವೇಗೌಡರ ಅಭಿಪ್ರಾಯ ಏನು ಅಂತ ಒತ್ತಾಯ ಮಾಡಿ ಕೇಳಿದರು. ಅದನ್ನು ಅವರ ಬಳಿಯೇ ಕೇಳಿ ಅಂತ ಹೇಳಿದ್ದೆ. ಅನುಮಾನ ಬಂದು ಕರೆ ಬಂದ ಸಂಖ್ಯೆ ಪರಿಶೀಲಿಸಿದಾಗ ಅದು ಗುಪ್ತಚರ ಇಲಾಖೆಯವರದ್ದು ಎಂದು ತಿಳಿದುಬಂತು. ಪತ್ರಕರ್ತರ ಹೆಸರಿನಲ್ಲಿ ಇವರು ಯಾಕೆ ಕರೆ ಮಾಡಬೇಕು? ಪ್ರತಿಪಕ್ಷದವರನ್ನ ಮಣಿಸಲು ಗುಪ್ತಚರ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ತನಿಖೆಗೆ ಆಗ್ರಹಿಸಿದ್ದೇನೆ’ ಎಂದುರಮೇಶ್ ಬಾಬು ಹೇಳಿದರು.

ಫೋನ್ ಕದ್ದಾಲಿಕೆ ತನಿಖೆಯನ್ನು ಸಿಬಿಐಗೆ ವಹಿಸಿದ್ದೇ ತಪ್ಪು. ಹಲವಾರು ಪ್ರಕರಣಗಳಲ್ಲಿ ಸಿಬಿಐ ಪ್ರತಿವಾದಿಯಾಗಿದೆ. ಹೀಗಿರುವಾಗ ತನಿಖೆ ಸಿಬಿಐಗೆ ವಹಿಸಲು ಹೇಗೆ ಸಾಧ್ಯ? ಸಿಬಿಐಗೆ ವಹಿಸುವ ಬಗ್ಗೆ ಮಾನದಂಡ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಹಿಂದೆಯೇ ನಿರ್ದೇಶನ ನೀಡಿದೆ. ಆದರೆಯಾವುದೇ ಸರ್ಕಾರ ಸಮಿತಿ ರಚನೆ ಮಾಡಿ ಮಾರ್ಗದರ್ರಶನ ಮಾಡಿಲ್ಲ ಎಂದು ಅವರು ಹೇಳಿದರು.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯವರ ಫೋನ್ ಕೂಡ ಟ್ಯಾಪಿಂಗ್ ಆಗಿತ್ತು. ಆಗ ಸಿಎಂ ಯಡಿಯೂರಪ್ಪ ವಿರುದ್ದವೇ ನೇರವಾಗಿ ಆರೋಪ ಮಾಡಿದ್ದರು. ಹೀಗಾಗಿ ಈಗಿನಪ್ರಕರಣ ಸಿಬಿಐಗೆ ವಹಿಸುವುದು ಬೇಡ. ಈ ಕುರಿತುಯಡಿಯೂರಪ್ಪನವರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದೇನೆ.ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಕೊಡಬೇಕು ಎಂದು ರಮೇಶ್ ಬಾಬು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.