ಬೆಂಗಳೂರು: ವಾಷಿಂಗ್ ಮಿಷನ್ ದುರಸ್ತಿ ಮಾಡಲೆಂದು ಹಗಲಿನಲ್ಲಿ ಮನೆಗಳಿಗೆ ಹೋಗಿ, ಅದೇ ಮನೆಯಲ್ಲೇ ರಾತ್ರಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಸುಮನ್ (20) ಎಂಬುವರನ್ನು ಬಾಗಲಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮಡಿಕೇರಿ ಜಿಲ್ಲೆಯ ವಿರಾಜ್ಪೇಟೆಯ ಬೊಳಮಾಡದ ಸುಮನ್, ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು. ಶೆಟ್ಟಿಹಳ್ಳಿ ಬಳಿಯ ಅರಳಿಕಟ್ಟೆ ವೃತ್ತ ಸಮೀಪದಲ್ಲಿ ವಾಸವಿದ್ದರು. ಅವರಿಂದ ₹ 10 ಲಕ್ಷ ಮೌಲ್ಯದ 217 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘10ನೇ ತರಗತಿವರೆಗೆ ಓದಿದ್ದ ಸುಮನ್, ವಾಷಿಂಗ್ ಮಿಷನ್ ದುರಸ್ತಿ ಕೆಲಸ ಕಲಿತಿದ್ದರು. ಜಸ್ಟ್ ಡಯಲ್ ಜಾಲತಾಣದ ಮೂಲಕ ಆರ್ಡರ್ ಪಡೆದು, ಗ್ರಾಹಕರ ಮನೆಗಳಿಗೆ ಹೋಗಿ ವಾಷಿನ್ ಮಷಿನ್ ದುರಸ್ತಿ ಮಾಡುತ್ತಿದ್ದರು.’
‘ದುರಸ್ತಿಗೆಂದು ಹಗಲಿನಲ್ಲಿ ಮನೆಗಳಿಗೆ ಹೋದಾಗಲೇ ಆರೋಪಿ, ಮಾಲೀಕರು ಹಾಗೂ ಮನೆಯಲ್ಲಿದ್ದವರನ್ನು ಆತ್ಮಿಯವಾಗಿ ಮಾತನಾಡಿಸುತ್ತಿದ್ದರು. ಯಾರೆಲ್ಲ ಯಾವ ವೇಳೆಯಲ್ಲಿ ಮನೆಯಲ್ಲಿರುತ್ತಾರೆ ಎಂಬ ಮಾಹಿತಿ ಪಡೆಯುತ್ತಿದ್ದರು. ದುರಸ್ತಿ ಮುಗಿಸಿ ಮರಳುತ್ತಿದ್ದ ಆರೋಪಿ, ರಾತ್ರಿ ವೇಳೆಯಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಎಸಗುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.
‘ಶೆಟ್ಟಿಹಳ್ಳಿ ವೃತ್ತದಲ್ಲಿ ತಡರಾತ್ರಿ ಆರೋಪಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ಅವರನ್ನು ತಡೆದು ಪ್ರಶ್ನಿಸಿದ್ದರು. ಸೂಕ್ತ ಉತ್ತರ ನೀಡದ ಆರೋಪಿಯನ್ನು ವಶಕ್ಕೆ ಪಡೆದ ಸಿಬ್ಬಂದಿ, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗಲೇ ಕಳ್ಳತನ ಕೃತ್ಯ ಬಯಲಾಯಿತು. ಆರೋಪಿ ಬಂಧನದಿಂದ 4 ಪ್ರಕರಣಗಳು ಪತ್ತೆಯಾಗಿವೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.