ADVERTISEMENT

ಸಂಚಾರ ನಿಯಮ ಉಲ್ಲಂಘನೆ: 3 ವರ್ಷದಲ್ಲಿ ₹660 ಕೋಟಿ ಸಂಗ್ರಹ – ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:32 IST
Last Updated 18 ಮಾರ್ಚ್ 2022, 4:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಚಾರ ನಿಯಮ‌ ಉಲ್ಲಂಘಿಸಿದ ಪ್ರಕರಣಗಳಲ್ಲಿ
₹ 660.97 ಕೋಟಿ ದಂಡ ಸಂಗ್ರಹಿಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ಸಿನ ದಿನೇಶ್‌ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ‘ವಸೂಲು ಮಾಡಿದ ದಂಡದ ಮೊತ್ತವನ್ನು ಸಂಚಾರ ಸುಧಾರಣೆಗಾಗಿ ಸುಧಾರಿತ ತಂತ್ರಜ್ಞಾನ ಅಳವಡಿಸಲು ಬಳಸಲಾಗುತ್ತದೆ. ಮುಖ್ಯವಾಗಿ, ಸಂಚಾರ ಸೂಚನಾ ಫಲಕ, ಸಿ.ಸಿ ಟಿವಿ ಕ್ಯಾಮೆರಾ, ಹೆದ್ದಾರಿ ಗಸ್ತು ವಾಹನ, ಇಂಟರ್‌ಸೆಪ್ಟರ್‌ ವಾಹನ ಖರೀದಿ, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲು ಬಳಸುವ ಪಿಡಿಎ ಸಾಧನ ಮುಂತಾದ ಪರಿಕರಗಳನ್ನು ಖರೀದಿಸಲು ಬಳಕೆ ಮಾಡಲಾಗುತ್ತದೆ’ ಎಂದಿದ್ದಾರೆ.

‘ಸಂಚಾರ ಸುಧಾರಣೆಗಾಗಿ 2018-19ರಿಂದ 2020–21ರವರೆಗಿನ ಮೂರು ವರ್ಷಗಳಲ್ಲಿ ₹ 67.75 ಕೋಟಿ ಬಿಡುಗಡೆ ಮಾಡಲಾಗಿದೆ. ಆ ಪೈಕಿ, ₹ 47.09 ಕೋಟಿ ವೆಚ್ಚ ಮಾಡಲಾಗಿದೆ. 2020–21ರ ಅನುದಾನದಲ್ಲಿ ಬಾಕಿ ಉಳಿದ ₹ 19.73 ಕೋಟಿಯನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್‌, ಕೆಆರ್‌ಡಿಸಿಎಲ್‌ ಸಂಸ್ಥೆಯಲ್ಲಿ ಠೇವಣಿಯಾಗಿಟ್ಟು, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದಾರೆ’ ಎಂದಿದ್ದಾರೆ.

ಔರಾದಕರ್‌ ವರದಿಗೆ ಕ್ರಮ: ‘ರಾಘವೇಂದ್ರ ಔರಾದಕರ್‌ ವರದಿಯ ಶಿಫಾರಸುಗಳನ್ನು ಸರ್ಕಾರ ಭಾಗಶಃ ಅಂಗೀಕರಿಸಿ, ಜಾರಿ ಮಾಡಿದೆ. ಇದರಿಂದ 84,773 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನುಕೂಲವಾಗಿದೆ’ ಎಂದೂ ಜ್ಞಾನೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.