ADVERTISEMENT

ರಾಜ್ಯದ ದಟ್ಟಾರಣ್ಯದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಬಳಕೆ: ಗುಪ್ತಚರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 20:04 IST
Last Updated 15 ಸೆಪ್ಟೆಂಬರ್ 2021, 20:04 IST
   

ಮಂಗಳೂರು: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ದಟ್ಟ ಅರಣ್ಯದ ಕೆಲವು ಪ್ರದೇಶಗಳಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಸದ್ದು ಮಾಡಿರುವ ಮಾಹಿತಿ ಲಭಿಸಿದೆ. ಇಲ್ಲಿಂದ ವಿದೇಶಕ್ಕೆ ಕರೆ ಸಂಪರ್ಕ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತುರಾಯಾ ಸ್ಯಾಟಲೈಟ್ ಫೋನ್ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ, ರಾಜ್ಯದ ಕರಾವಳಿಯಲ್ಲಿ ಈ ಫೋನ್ ಸಂಪರ್ಕ
ಆಗಿರುವುದನ್ನು ಗುಪ್ತಚರ ಮೂಲಗಳು ದೃಢಪಡಿಸಿವೆ.

ಇತ್ತೀಚೆಗೆ ಶ್ರೀಲಂಕಾದಿಂದ ಐಎಸ್‌ ಪ್ರೇರಿತ ಶಂಕಿತ ಉಗ್ರರು ಭಾರತದ ಕರಾವಳಿಗೆ ನುಸುಳಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಕಾರಣದಿಂದ ಕೇಂದ್ರ ಗುಪ್ತಚರ ಇಲಾಖೆಯಿಂದ ಕಟ್ಟೆಚ್ಚರದ ಸೂಚನೆ ಬಂದಿತ್ತು. ಇದರ ಬೆನ್ನಲ್ಲೇ ನಿಷೇಧಿತ ಸ್ಯಾಟಲೈಟ್ ಫೋನ್ ಕರಾವಳಿಯಲ್ಲಿ ಸದ್ದುಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯ ಅರಣ್ಯ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಫೋನ್ ಸಂಪರ್ಕವಾಗಿರುವುದು ಗೊತ್ತಾಗಿದೆ.

ADVERTISEMENT

ತುರಾಯಾ ಫೋನ್ ಅನ್ನು ಬಳಸಿದವರು ಯಾರು, ಅದರ ಮೂಲಕ ಯಾರನ್ನು ಸಂಪರ್ಕಿಸಲಾಗಿದೆ ಎಂಬುದನ್ನು ಖಚಿತವಾಗಿ ಪತ್ತೆ ಮಾಡಲು ಆಗದು. ಹೀಗಾಗಿ ಈ ಫೋನ್‌ ಬಳಕೆಯನ್ನು ಭಾರತದಲ್ಲಿ 2012ರಲ್ಲೇ ನಿಷೇಧಿಸಲಾಗಿದೆ. ಈ ಫೋನ್ ಬಳಕೆಯಾಗಿ ಒಂದು ದಿನದ ಬಳಿಕ ಗುಪ್ತಚರ ಪಡೆಗಳಿಗೆ ಸಂದೇಶ ಬರುತ್ತದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.