
ಬೆಂಗಳೂರು: ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಹೊಸತನ ನಿರೂಪಿಸುವ ಸಾಮರ್ಥ್ಯ ಇರುವವರನ್ನು ಆಯ್ಕೆ ಮಾಡಬೇಕು. ವಂಶಪಾರಂಪರ್ಯಕ್ಕೆ ಅವಕಾಶ ಇರಬಾರದು’ ಎಂದು ಮಹಾಸಭಾದ ಮುಖಂಡ ಎಂ.ಟಿ.ಸುಭಾಷ್ಚಂದ್ರ ಒತ್ತಾಯಿಸಿದ್ದಾರೆ.
ಮಹಾಸಭಾದ ನಾಯಕತ್ವಕ್ಕೆ ಪಕ್ಷ ರಾಜಕಾರಣವೂ ಒಂದು ಮಿತಿ ಅಥವಾ ದೌರ್ಬಲ್ಯ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಹಾಗಾಗಿ, ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಸ್ಥಾನದ ನೇಮಕದಲ್ಲಿ ವಂಶಪಾರಂಪರ್ಯಕ್ಕೆ ಅವಕಾಶ ನೀಡಿದರೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.
ಸಂಘಟನೆಯ ಚಟುವಟಿಕೆಗಳ ವ್ಯಾಪ್ತಿಯು ಧಾರ್ಮಿಕ ಚೌಕಟ್ಟನ್ನು ಮೀರಿ ಅಥವಾ ವಿಸ್ತರಣೆಗಾಗಿ ವಿಶಾಲ, ಸಾಮಾಜಿಕ ನೆಲೆ ಕಂಡುಕೊಳ್ಳುವುದು ಆಧುನಿಕ ಕಾಲಘಟ್ಟದ ಅನಿವಾರ್ಯತೆಯೂ ಆಗಿದೆ. ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿರುವ ಸಮುದಾಯದ ಭಾಷೆ, ಆಲೋಚನೆ, ಸಂಸ್ಕೃತಿಯಲ್ಲಿ ಗಮನಾರ್ಹ ವೈವಿಧ್ಯತೆ ಇರುವಂತೆ ವೈರುಧ್ಯವೂ ಇವೆ. ಇಂತಹ ವಿಷಯಗಳನ್ನು ಸಮಭಾವ, ಸಂಯಮ ಮತ್ತು ಸಂಘಟನಾ ಚತುರತೆಯಿಂದ ತೂಗಿಸಿಕೊಂಡು ಹೋಗುವ, ಬೆಸೆಯುವ ಮುಂದಾಲೋಚನೆಯ ನಾಯಕತ್ವದ ಅಗತ್ಯವಿದೆ. ಹಾಗಾಗಿ, ಹಲವು ವರ್ಷಗಳಿಂದ ಸಮಾಜಕ್ಕೆ ಸಾಕಷ್ಟು ಸೇವೆ ಸಲ್ಲಿಸುತ್ತಿರುವ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಅಂಥವರನ್ನು ಪರಿಗಣಿಸಬಹುದು ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.