ಹೊಸಪೇಟೆ (ವಿಜಯನಗರ): ‘ರಾಜ್ಯ ಸರ್ಕಾರ ಪ್ರತಿಯೊಂದು ಪ್ರಕರಣಕ್ಕೂ ‘ಬಿ’ ರಿಪೋರ್ಟ್ ಹಾಕುತ್ತಿದೆ. ಇದು ‘ಬಿ’ ರಿಪೋರ್ಟ್ ಸರ್ಕಾರ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ‘ಬಿ ರಿಪೋರ್ಟ್ ಹಾಕಿದ ಎಲ್ಲಾ ಕೇಸ್ಗಳ ಮರು ತನಿಖೆ ನಡೆಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.
ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಪ್ರಜಾ ಧ್ವನಿ’ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಗುತ್ತಿಗೆದಾರರ ಸಾವು, ನೇಮಕಾತಿ ಸೇರಿದಂತೆ ಇತರೆ ಅಕ್ರಮಗಳನ್ನು ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಎಲ್ಲಾ ಕೇಸ್ಗಳಿಗೂ ‘ಬಿ’ ರಿಪೋರ್ಟ್ ಹಾಕಿದೆ. ಆದರೆ, ನಮ್ಮ ಸರ್ಕಾರ ಬಂದ ನಂತರ ಮರು ತನಿಖೆ ನಡೆಸುತ್ತೇವೆ. ಜನ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಆ ನೋವಿಗೆ ಕಾಂಗ್ರೆಸ್ ಪಕ್ಷ ಸ್ಪಂದಿಸಲಿದೆ ಎಂದು ಹೇಳಿದರು.
ಪಿಎಸ್ಐ, ಎಂಜಿನಿಯರ್, ಪ್ರಾಧ್ಯಾಪಕರು, ಶಿಕ್ಷಕರು ಸೇರಿದಂತೆ ಯಾವುದೇ ಹುದ್ದೆಗೆ ಅರ್ಜಿ ಹಾಕಿದರು ಲಂಚ ಪಡೆಯಲಾಗುತ್ತಿದೆ. ಲಂಚ ಪಡೆದು ಅಧಿಕಾರಿಗಳು ಸಿಕ್ಕಿಕೊಂಡಿದ್ದಾರೆ. ದುಡ್ಡು ಪಡೆದವರು, ಕೊಟ್ಟವರು ಜೈಲಿನಲ್ಲಿದ್ದಾರೆ. ಆದರೆ, ಅದಕ್ಕಾಗಿ ಬ್ರೋಕರ್ ಕೆಲಸ ಮಾಡಿದ ಮಂತ್ರಿಗಳು ಹೊರಗಿದ್ದಾರೆ. ಅವರ ಎಲ್ಲ ಟೇಪ್, ವಿಡಿಯೊ ಹೊರಗೆ ಬಂದಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ರಾಷ್ಟ್ರೀಕರಣ ಕೆಲಸ ಮಾಡಿದರೆ ಪ್ರತಿಯೊಂದರಲ್ಲೂ ಬಿಜೆಪಿ ಖಾಸಗೀಕರಣ ಮಾಡುತ್ತಿದೆ. ‘ಆಪರೇಷನ್ ಕಮಲ’ದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನರಿಗಾಗಿ ಏನು ಮಾಡಿದೆ. ಅವರು ಕೊಟ್ಟ 600 ಭರವಸೆಗಳಲ್ಲಿ ಶೇ 10ರಷ್ಟು ಈಡೇರಿಸಲು ಸಾಧ್ಯವಾಗಿಲ್ಲ. ಬಿಜೆಪಿಯ ಪಾಪದ ಪುರಾಣದ ಪಟ್ಟಿ ಕಾಂಗ್ರೆಸ್ನಿಂದ ಬಿಡುಗಡೆಗೊಳಿಸಲಾಗಿದೆ. ನಿತ್ಯ ಒಂದೊಂದು ಪ್ರಶ್ನೆ ಕೇಳಲಾಗುತ್ತಿದೆ. ಆದರೆ, ಮುಖ್ಯಮಂತ್ರಿಯಾಗಲಿ, ಬಿಜೆಪಿ ಮುಖಂಡರಾಗಲಿ ಅದಕ್ಕೆ ಉತ್ತರ ಕೊಡುತ್ತಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.