ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿದ ಸಚಿವ ಶಿವಾನಂದ ಪಾಟೀಲ ಅವರು ಸಮಾಲೋಚನೆ ನಡೆಸಿದರು
ಬೆಂಗಳೂರು: ‘ಶಾಸಕ ಸ್ಥಾನಕ್ಕೆ ಬಸನಗೌಡ ಪಾಟೀಲ ಯತ್ನಾಳ್ ಅವರು ರಾಜೀನಾಮೆ ಪತ್ರ ಸಲ್ಲಿಸದ ಕಾರಣ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಸಲ್ಲಿಸಿದ್ದ ಷರತ್ತುಬದ್ಧ ರಾಜೀನಾಮೆಯನ್ನು ಅಂಗೀಕರಿಸಿಲ್ಲ’ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಶಿವಾನಂದ ಪಾಟೀಲ ಅವರು 6 ಬಾರಿ ವಿಧಾಸಭೆಯ ಶಾಸಕರಾಗಿ, ತಮ್ಮ ಅಚಲ ನಿಲುವಿಗೆ ಹೆಸರುವಾಸಿಯಾಗಿದ್ದಾರೆ. ಸಮಾಜದ ಪ್ರತಿಯೊಬ್ಬರಿಗೂ ಬೇಕಾದ ಜನಾನುರಾಗಿ. ಯಾವುದೇ ಜಾತಿ ಅಥವಾ ಧರ್ಮಾಧಾರಿತ ಗಲಭೆಗಳಿಗೆ ಅವಕಾಶ ನೀಡದ ಹಿರಿಯ ಧುರೀಣ, ರಾಜ್ಯವೇ ಹೆಮ್ಮೆ ಪಡುವ ನಾಯಕ’ ಎಂದು ಬಣ್ಣಿಸಿದ್ದಾರೆ.
‘ಶಾಸಕ ಬಸನವಗೌಡ ಪಾಟೀಲ ಯತ್ನಾಳ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ, ಅವರ ವಿರುದ್ಧ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಾವು ಸಲ್ಲಿಸಿರುವ ಕರ್ನಾಟಕ ವಿಧಾನಸಭೆಗೆ ಷರತ್ತುಬದ್ಧ ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕು ಎಂದು ಹೇಳಿದ್ದಾರೆ. ಆದರೆ ಯತ್ನಾಳ್ ಅವರು ಈವರೆಗೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ವೈಯಕ್ತಿಕವಾಗಿಯೂ ನನ್ನನ್ನು ಭೇಟಿ ಮಾಡಿಲ್ಲ. ವಿಧಾನಸಭಾ ಸಚಿವಾಲಯವೂ ಯತ್ನಾಳ್ ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ ಎಂಬ ಅಂಶವನ್ನು ಶಿವಾನಂದ ಅವರಿಗೆ ತಿಳಿಸಲಾಗಿದೆ’ ಎಂದು ಖಾದರ್ ಹೇಳಿದ್ದಾರೆ.
‘ಈ ಹಿನ್ನೆಲೆಯಲ್ಲಿ ವಿಧಾನಸಭೆಯ ನಿಯಮಗಳ ಪ್ರಕಾರ ಶಿವಾನಂದ ಪಾಟೀಲ ಅವರ ಷರತ್ತುಬದ್ಧ ರಾಜೀನಾಮೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಲಾಗಿದೆ. ರಾಜ್ಯಕ್ಕೆ ಅನುಭವಿ, ಹಿರಿಯರಾದ ಶಿವಾನಂದ ಪಾಟೀಲ ಅವರ ಅಗತ್ಯವಿದೆ’ ಎಂದು ಸಭಾಧ್ಯಕ್ಷ ಖಾದರ್ ಹೇಳಿದ್ದಾರೆ.
ಯತ್ನಾಳ ಅವರು ಇತ್ತೀಚೆಗೆ ಶಿವಾನಂದ ಪಾಟೀಲ ಅವರನ್ನು ಉದ್ದೇಶಿಸಿ, ‘ಅವರು ಪಾಟೀಲರೇ ಅಲ್ಲ, ರಾಜಕೀಯಕ್ಕಾಗಿ ‘ಪಾಟೀಲ’ ಅಂಥ ಉಪನಾಮ ಸೇರಿಸಿಕೊಂಡಿದ್ದಾರೆ. ಅಪ್ಪನಿಗೆ ಹುಟ್ಟಿದವನೇ ಆದರೆ ಶುಕ್ರವಾರದೊಳಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ನನ್ನ ಎದುರು ಸ್ಪರ್ಧಿಸಲಿ’ ಎಂದು ಸವಾಲು ಹಾಕಿದ್ದರು.
ಈ ಸವಾಲು ಸ್ವೀಕರಿಸಿದ್ದ ಶಿವಾನಂದ ಪಾಟೀಲ, ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ರಾಜೀನಾಮೆ ಪತ್ರ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಿವಾನಂದ ಪಾಟೀಲ, ‘ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಇದು ವೈಯಕ್ತಿಕ ತೀರ್ಮಾನ. ಯತ್ನಾಳ ರಾಜೀನಾಮೆ ನೀಡಿ ನನ್ನ ವಿರುದ್ಧ ಚುನಾವಣೆ ಎದುರಿಸಲಿ’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.