ಕೀವ್:ಪೂರ್ವ ಉಕ್ರೇನಿನ ಸೆವೆರೊಡೊನೆಟ್ಸ್ಕ್ ನಗರ ಸಮೀಪದ ಸಿವರ್ಸ್ಕಿ ಡೊನೆಟ್ಸ್ ನದಿ ದಾಟಲು ರಷ್ಯಾ ಪಡೆಗಳು ಬಳಸುತ್ತಿದ್ದ ದೋಣಿಗಳ (ಪಾಂಟೂನ್) ಸೇತುವೆ ನಾಶಪಡಿಸಿದ ಉಕ್ರೇನ್ ಸೇನೆ, ರಷ್ಯಾದಸುಮಾರು ಒಂದು ಸಾವಿರ ಸೈನಿಕರು ಮತ್ತು ಅಪಾರ ಸಂಖ್ಯೆಯ ಸೇನಾ ವಾಹನಗಳನ್ನು ಹೊಡೆದುರುಳಿಸಿದೆ.
ಬಿಲೋಹೊರಿವ್ಕಾದಲ್ಲಿ ಎರಡು ದಿನಗಳು ನಡೆದ ಈ ದಾಳಿಯಲ್ಲಿ ರಷ್ಯಾ ಪಡೆಗಳ ಪಾಂಟೂನ್ ಸೇತುವೆ, ಸೇನಾ ವಾಹನಗಳು, 73 ಯುದ್ಧ ಟ್ಯಾಂಕ್ಗಳು, ಶಸ್ತ್ರಾಸ್ತ್ರ ಒಳಗೊಂಡ ಯುದ್ಧತಂತ್ರದ ಒಂದು ತುಕಡಿ (ಸುಮಾರು 1,000 ಸೈನಿಕರು)ಯನ್ನು ಧ್ವಂಸ ಮಾಡಿರುವ ಚಿತ್ರಗಳುಮತ್ತು ವಿಡಿಯೊ ತುಣುಕುಗಳನ್ನುಉಕ್ರೇನ್ ವಾಯುದಾಳಿ ಕಮಾಂಡ್ ಬಿಡುಗಡೆ ಮಾಡಿದೆ.
‘ಯುದ್ಧತಂತ್ರದ ಶಸ್ತ್ರಸಜ್ಜಿತ ಬೆಟಾಲಿಯನ್ ಬಲವನ್ನು ರಷ್ಯಾ ಕಳೆದುಕೊಂಡಿದೆ. ನದಿ ದಾಟುವ ಅಪಾಯಕಾರಿ ಹೆಜ್ಜೆ ರಷ್ಯಾದ ಕಮಾಂಡರ್ಗಳ ಮೇಲಿನ ಒತ್ತಡದ ಸಂಕೇತ. ಪೂರ್ವದಲ್ಲಿ ಉಕ್ರೇನ್ ಮುನ್ನಡೆ ಸಾಧಿಸುವ ಹಂತದಲ್ಲಿದೆ’ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.
ವಿಚಾರಣೆ ಆರಂಭ:ರಷ್ಯಾದ ಸಾರ್ಜೆಂಟ್ 21 ವರ್ಷದ ವಾಡಿಮ್ ಶಿಶಿಮರಿನ್ ಎಂಬುವವರನ್ನು ಯುದ್ಧಾಪರಾಧದ ಮೊದಲ ಪ್ರಕರಣದಲ್ಲಿ ಉಕ್ರೇನ್ಪ್ರಾಸಿಕ್ಯೂಟರ್ ಜನರಲ್ ಇರಿನಾ ವೆನೆಡಿಕ್ಟೋವಾ ವಿಚಾರಣೆ ನಡೆಸಿದರು.
ಈಶಾನ್ಯ ಸುಮಿ ಪ್ರದೇಶದ ಹಳ್ಳಿಯೊಂದರಲ್ಲಿ ಫೆ.28ರಂದು ಉಕ್ರೇನ್ ನಾಗರಿಕನ ತಲೆಗೆ ಗುಂಡು ಹಾರಿಸಿದ ಆರೋಪ ಶಿಶಿಮರಿನ್ ಮೇಲಿದೆ. ಇದು ಸಾಬೀತಾದರೆ ಜೀವಾವಧಿ ಶಿಕ್ಷೆಗೆ ಗುರಿಯಾಗುವ ನಿರೀಕ್ಷೆ ಇದೆ.
ರಷ್ಯಾದ 41 ಸೈನಿಕರ ವಿರುದ್ಧ ಯುದ್ಧ ಅಪರಾಧ ಪ್ರಕರಣಗಳನ್ನು ಸಿದ್ಧಪಡಿಸುತ್ತಿರುವುದಾಗಿ ಉಕ್ರೇನ್ ಹೇಳಿದೆ.
ಉಕ್ಕಿನ ಸ್ಥಾವರದಿಂದ ಸಾವಿರ ಸೈನಿಕರು ಪಾರು:ಅಜೋವ್ಸ್ಟಾಲ್ ಉಕ್ಕಿನ ಸ್ಥಾವರದಿಂದ ಉಕ್ರೇನಿನ ಸಾವಿರ ಸೈನಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಗಂಭೀರ ಗಾಯಗೊಂಡಿರುವ 60 ಸೈನಿಕರು ಇನ್ನೂ ಅಲ್ಲೇ ಉಳಿದಿದ್ದಾರೆ. ಅವರನ್ನು ಸ್ಥಳಾಂತರಕ್ಕೆ ರಷ್ಯಾ ಸಮ್ಮತಿಸುತ್ತಿಲ್ಲ ಎಂದು ಉಕ್ರೇನ್ ಉಪ ಪ್ರಧಾನಿ ಇರಿನಾ ವೆರೆಶ್ಚುಕ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.