ADVERTISEMENT

ಅಪಘಾತ: ಉತ್ತರ ಪ್ರದೇಶದಿಂದ ನೇಪಾಳಕ್ಕೆ ತೆರಳುತ್ತಿದ್ದ 12 ವಲಸೆ ಕಾರ್ಮಿಕರು ಸಾವು

ಏಜೆನ್ಸೀಸ್
Published 1 ಜೂನ್ 2020, 8:56 IST
Last Updated 1 ಜೂನ್ 2020, 8:56 IST
ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಟ್ರಕ್‌ಗೆ ಡಿಕ್ಕಿ
ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಟ್ರಕ್‌ಗೆ ಡಿಕ್ಕಿ   

ಕಾಠ್ಮಂಡು: ಭಾನುವಾರ ಮಧ್ಯರಾತ್ರಿ ಪೂರ್ವ-ಪಶ್ಚಿಮ ಹೆದ್ದಾರಿಯ ಬಂಕೆ ಜಿಲ್ಲೆಯ ತುರಿಯಾ ಅರಣ್ಯ ಪ್ರದೇಶದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 12 ವಲಸೆ ಕಾರ್ಮಿಕರು ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಿಂದ ನೇಪಾಳದ ಸಲ್ಯಾನ್ ಜಿಲ್ಲೆಗೆ ಹೋಗುವ ಮಾರ್ಗದಲ್ಲಿ ನೇಪಾಳಿ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಈ ವಾಹನವು ಭಾನುವಾರ ಮತ್ತು ಸೋಮವಾರದ ಮಧ್ಯರಾತ್ರಿ ಸುಮಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಲಸೆ ಕಾರ್ಮಿಕರು ಭಾರತದಿಂದ ಹಿಂತಿರುಗುತ್ತಿದ್ದರು. ಮಧ್ಯರಾತ್ರಿಯಲ್ಲಿ ಅಪಘಾತ ಸಂಭವಿಸಿದೆ. ಎಲ್ಲಾ ಶವಗಳನ್ನು ಮತ್ತು ಗಾಯಗೊಂಡವರನ್ನು ನೇಪಾಳಗುಂಜ್ ನಗರದ ಭೇರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಬಂಕೆ ಜಿಲ್ಲಾಧಿಕಾರಿ ರಂಬಹಾದೂರ್ ಕುರುಂಗ್ವಾಂಗ್ ದೂರವಾಣಿ ಮೂಲಕ ಎಎನ್‌ಐಗೆ ತಿಳಿಸಿದ್ದಾರೆ.

ADVERTISEMENT

ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನವು ವೇಗವಾಗಿ ಚಲಿಸುತ್ತಿತ್ತು ಮತ್ತು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಟ್ರಕ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ ಎಂದು ಬಂಕೆ ಜಿಲ್ಲೆಯ ಪೊಲೀಸ್ ಇನ್ಸ್‌ಪೆಕ್ಟರ್ ಹೃದಯೇಶ್ ಸಪ್ಕೋಟಾ ಮಾಹಿತಿ ನೀಡಿದ್ದಾರೆ.

ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಈ ಮೂವರನ್ನು ಇತರ ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಲು ಭೇರಿ ಆಸ್ಪತ್ರೆ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.