ಢಾಕಾ/ನವದೆಹಲಿ: ದೇಶದ್ರೋಹದ ಆರೋಪ ಎದುರಿಸುತ್ತಿರುವ ‘ಸಮ್ಮಿಲಿತ್ ಸನಾತನಿ ಜಾಗರಣ ಜೋತೆ’ ಎಂಬ ಹಿಂದೂ ಸಂಘಟನೆಯ ವಕ್ತಾರ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರ ಬಂಧನದ ವೇಳೆ ನಡೆದ ಘರ್ಷಣೆಯಲ್ಲಿ ಹತ್ಯೆಯಾದ ವಕೀಲ ಸೈಫುಲ್ ಇಸ್ಲಾಂ ಅವರ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ನ್ಯಾಯಾಲಯದ ಸಂಕೀರ್ಣ ದಲ್ಲಿನ ಮಸೀದಿ ಕಟ್ಟಡದ ಎರಡನೇ ಮಹಡಿಯಲ್ಲಿ ಅಳವಡಿಸಿದ್ದ ಕಿಟಕಿ ಗಾಜುಗಳನ್ನು ಒಡೆದ, ವಾಹನಗಳನ್ನು ಜಖಂಗೊಳಿಸಿದ, ವಕೀಲರ ಕೊಠಡಿಗಳ ಒಳಗೆ ನುಗ್ಗಿದ ಆರೋಪಕ್ಕೆ ಸಂಬಂಧಿಸಿ 21 ಮಂದಿಯನ್ನು ಬಂಧಿಸಲಾಗಿದೆ. ಭದ್ರತಾ ಪಡೆಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಾಗೂ ಅವರ ಮೇಲೆ ದಾಳಿ ನಡೆಸಿದ್ದಕ್ಕಾಗಿ ಇವರನ್ನು ಬಂಧಿಸಲಾಗಿದೆ’ ಎಂದು ಬಾಂಗ್ಲಾದ ‘ಬಿಡಿನ್ಯೂಸ್24.ಕಾಂ’ ವರದಿ ಮಾಡಿದೆ.
‘21 ಮಂದಿ ಬಂಧಿತರಲ್ಲಿ ಆರು ಮಂದಿ, ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ‘ಅವಾಮಿ ಲೀಗ್’ ಹಾಗೂ ಇದರ ವಿದ್ಯಾರ್ಥಿ ಘಟಕದ ಕಾರ್ಯಕರ್ತರು. ವಶಕ್ಕೆ ಪಡೆದುಕೊಳ್ಳುವ ಸಂದರ್ಭದಲ್ಲಿ ಇವರ ಬಳಿ ಪೆಟ್ರೋಲ್ ಬಾಂಬ್ಗಳು ದೊರೆತವು’ ಎಂದು ಸರ್ಕಾರ ಹೇಳಿದೆ.
ತನಿಖೆಗೆ ಆದೇಶ: ವಕೀಲ ಸೈಫುಲ್ ಇಸ್ಲಾಂ ಅವರ ಹತ್ಯೆಯನ್ನು ಖಂಡಿಸಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರು, ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ. ‘ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಚಟ್ಟೋಗ್ರಾಮದಲ್ಲಿ ಹಾಗೂ ಈ ನಗರದ ಸುತ್ತಮುತ್ತಲ ಸೂಕ್ಷ್ಮ ಪ್ರದೇಶಗಳಲ್ಲಿನ ಭದ್ರತೆಯನ್ನು ಬಿಗಿಗೊಳಿಸಿ’ ಎಂದೂ ಹೇಳಿದ್ದಾರೆ.
ವಕೀಲನ ಹತ್ಯೆ: ಖಂಡನೆ–ತನಿಖೆಗೆ ಆದೇಶ
ವಕೀಲ ಸೈಫುಲ್ ಇಸ್ಲಾಂ ಅವರ ಹತ್ಯೆಯನ್ನು ಖಂಡಿಸಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು, ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ. ‘ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಚಟ್ಟೋಗ್ರಾಮದಲ್ಲಿ ಹಾಗೂ ಈ ನಗರದ ಸುತ್ತಮುತ್ತಲ ಸೂಕ್ಷ್ಮ ಪ್ರದೇಶಗಳಲ್ಲಿನ ಭದ್ರತೆಯನ್ನು ಬಿಗಿಗೊಳಿಸಿ’ ಎಂದೂ ಹೇಳಿದ್ದಾರೆ.
ಆರಂಭದಿಂದಲೂ ನಮ್ಮ ಸರ್ಕಾರವು ಅಲ್ಪಸಂಖ್ಯಾತರ ಬೇಡಿಕೆಗಳನ್ನು ಪರಿಗಣಿಸುತ್ತಲೇ ಇದೆ. ಆದರೆ, ಚಿನ್ಮಯಿ ದಾಸ್ ಅವರು ತಮ್ಮ ಹೇಳಿಕೆಗಳು ಹಾಗೂ ಭಾಷಣಗಳ ಮೂಲಕ ದೇಶದಲ್ಲಿ ಕೋಮು ಧ್ರುವೀಕರಣ ಮಾಡಲು ಯತ್ನಿಸಿದ್ದರು. ಚಿನ್ಮಯಿ ಬೆಂಬಲಿಗರಾದ ಹಿಂದೂ ಉಗ್ರರು ವಕೀಲ ಇಸ್ಲಾಂನನ್ನು ಹತ್ಯೆ ಮಾಡಿದ್ದಾರೆ. ಇವರಿಗೆ ಕಾನೂನು ಮೂಲಕವೇ ಗರಿಷ್ಠ ಶಿಕ್ಷೆ ಆಗುವಂತೆ ನಮ್ಮ ಸರ್ಕಾರವು ಮಾಡುತ್ತದೆ- ನಹೀದ್ ಇಸ್ಲಾಂ, ತಾರತಮ್ಯ ವಿರೋಧಿ ಚಳವಳಿಯ ನಾಯಕ, ಮಧ್ಯಂತರ ಸರ್ಕಾರಕ್ಕೆ ಸಲಹೆಗಾರ (‘ಎಕ್ಸ್’ ಪೋಸ್ಟ್)
ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳ ಕುರಿತು ನಾವು ಮಾಡಿಕೊಂಡಿರುವ ಒಪ್ಪಂದ ಹಾಗೂ ಷರತ್ತುಗಳಿಗೆ ವ್ಯತಿರಿಕ್ತವಾಗಿ ನೀವು ಪ್ರತಿಕ್ರಿಯಿಸಿದ್ದೀರಿ. ನಮ್ಮ ನಡುವಿನ ಸ್ನೇಹ ಸಂಬಂಧಕ್ಕೂ ಈ ಹೇಳಿಕೆ ವ್ಯತಿರಿಕ್ತವಾಗಿದೆ. ‘ನಿರ್ದಿಷ್ಟ ಆರೋಪ’ದ ಮೇಲೆ ದಾಸ್ ಅವರನ್ನು ಬಂಧಿಸಲಾಗಿದೆ. ಅಲ್ಲಿಂದ ಈಚೆಗೆ ಕೆಲವು ಗುಂಪುಗಳು ಚಿನ್ಮಯಿ ಅವರ ವಿಚಾರವನ್ನು ತಿರುಚಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ಹೇಳಿಕೆಯು ನಮಗೆ ಗಾಬರಿಯನ್ನೂ ತೀವ್ರ ನೋವನ್ನೂ ಉಂಟುಮಾಡಿದೆಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಭಾರತದ ಹೇಳಿಕೆಗೆ ಪ್ರತಿಕ್ರಿಯೆ)
ಚಿನ್ಮಯಿ ಕೃಷ್ಣದಾಸ್ ಅವರ ಬಂಧನವನ್ನು ಕೋಲ್ಕತ್ತದಲ್ಲಿನ ಇಸ್ಕಾನ್ ಹಾಗೂ ಬಾಂಗ್ಲಾದೇಶದ ಇಸ್ಕಾನ್ ಖಂಡಿಸಿವೆ. ಚಿನ್ಮಯಿ ಅವರು ಬಾಂಗ್ಲಾದೇಶದಲ್ಲಿನ ಇಸ್ಕಾನ್ನ ಸದಸ್ಯರಾಗಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಅವರನ್ನು ಇಸ್ಕಾನ್ನಿಂದ ಹೊರದಬ್ಬಲಾಗಿತ್ತು.
‘ಇಸ್ಕಾನ್ ಹಾಗೂ ರಾಮಕೃಷ್ಣ ಮಿಷನ್ನಂಥ ಹಿಂದೂ ಧಾರ್ಮಿಕ ಸಂಘಟನೆಗಳ ವಿರುದ್ಧ ಮುಸ್ಲಿಮರು ಕಳೆದ ಮೂರು ತಿಂಗಳಿನಿಂದ ಬೆದರಿಕೆ ಒಡ್ಡುತ್ತಿದ್ದಾರೆ. ಚಿನ್ಮಯಿ ಅವರ ಬಂಧನವು ಇತ್ತೀಚಿನ ಉದಾಹರಣೆ ಯಾಗಿದೆ. ಇಂಥ ಭಯದ ಸನ್ನಿವೇಶದಲ್ಲಿ ಭಾರತದ ವಿದೇಶಾಂಗ ಸಚಿವಾಲಯ ಹಾಗೂ ಕೇಂದ್ರ ಗೃಹ ಸಚಿವಾಲಯವು ಬಾಂಗ್ಲಾದ ಹಿಂದೂಗಳ ಮೇಲೆ ದಾಳಿಗಳಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕೋಲ್ಕತ್ತದಲ್ಲಿನ ಇಸ್ಕಾನ್ ಹೇಳಿದೆ. ವಿಶ್ವಸಂಸ್ಥೆ ಮಧ್ಯೆಪ್ರವೇಶಿಸಬೇಕು ಎಂದೂ ಆಗ್ರಹಿಸಿದೆ.
ಬಾಂಗ್ಲಾದೇಶವು ನಮ್ಮ ಜನ್ಮಸ್ಥಳ ಮತ್ತು ನಮ್ಮ ಪೂರ್ವಜರ ಸ್ಥಳ. ಆದ್ದರಿಂದ, ಸನಾತನಿಗಳು ಶಾಂತಿಯುತವಾಗಿ ಸಹಬಾಳ್ವೆ ನಡೆಸುವಂತೆ ಸರ್ಕಾರವು ಕ್ರಮ ಕೈಗೊಳ್ಳಬೇಕು’ ಎಂದು ಬಾಂಗ್ಲಾದ ಇಸ್ಕಾನ್ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.