
ಲಾಹೋರ್/ ಇಸ್ಲಾಮಾಬಾದ್: ‘ಪಾಕಿಸ್ತಾನದ ಸೇನೆ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಒಬ್ಬ ಮುಸ್ಲಿಂ ಮೂಲಭೂತವಾದಿಯಾಗಿದ್ದು, ಆತ ಸದಾ ಭಾರತದೊಂದಿಗೆ ಯುದ್ಧ ನಡೆಸಲು ಹಪಾಹಪಿಸುತ್ತಾನೆ’ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್ ಹೇಳಿದ್ದಾರೆ.
ಸ್ಕೈ ನ್ಯೂಸ್ ಎಂಬ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಲೀಮಾ ಈ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ ತಿಂಗಳಲ್ಲಿ ನಡೆದ ಯುದ್ಧಕ್ಕೆ ಕಾರಣ ಏನಿರಬಹುದು ಎಂಬ ಪ್ರಶ್ನೆಗೆ ಅಲೀಮಾ ಈ ಉತ್ತರ ನೀಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
‘ತನ್ನ ಸಹೋದರ ಇಮ್ರಾನ್ ಖಾನ್ ಒಬ್ಬ ಉದಾರವಾದಿ. ಆತ ಅಧಿಕಾರದಲ್ಲಿದ್ದಾಗಲೆಲ್ಲಾ ಭಾರತದೊಂದಿಗೆ, ಬಿಜೆಪಿಯೊಂದಿಗೆ ಸ್ನೇಹಯುತ ಸಂಬಂಧ ವೃದ್ಧಿಸಲು ಪ್ರಯತ್ನಿಸಿದ್ದಾರೆ. ಆದರೆ, ಮುನೀರ್ ಇಸ್ಲಾಂ ಸಂಪ್ರದಾಯವಾದಿಯಾಗಿದ್ದು, ಯಾರು ಇಸ್ಲಾಂ ಅನ್ನು ನಂಬುವುದಿಲ್ಲವೋ ಅಂಥವರ ವಿರುದ್ಧ ಯುದ್ಧ ಮಾಡುವಂತೆ ಆತನ ತೀವ್ರಗಾಮಿ ಮನಸ್ಥಿತಿ ಪ್ರಚೋದಿಸುತ್ತದೆ. ಇದರಿಂದ ಭಾರತ ಮಾತ್ರವಲ್ಲದೇ, ಅದರ ಮಿತ್ರರಾಷ್ಟ್ರಗಳೂ ತೊಂದರೆ ಅನುಭವಿಸುವಂತಾಗಿದೆ’ ಎಂದೂ ಅಲೀಮಾ ಆರೋಪಿಸಿದ್ದಾರೆ.
ಮತ್ತೊಂದೆಡೆ, ಇಮ್ರಾನ್ ಖಾನ್ ಕೂಡ ಮುನೀರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
‘ಮುನೀರ್ ಉದ್ದೇಶಪೂರ್ವಕವಾಗಿಯೇ ಅಫ್ಗಾನಿಸ್ತಾನದೊಂದಿಗೆ ಸಂಘರ್ಷ ಹೆಚ್ಚಿಸುತ್ತಿದ್ದಾರೆ. ಅವರ ನೀತಿಗಳು ಪಾಕಿಸ್ತಾನಕ್ಕೆ ಮುಳುವಾಗಿದ್ದು, ಭಯೋತ್ಪಾದನೆ ನಿಯಂತ್ರಣ ತಪ್ಪಿದೆ. ಅವರಿಗೆ ರಾಷ್ಟ್ರೀಯ ಹಿತಾಸಕ್ತಿಯ ಚಿಂತೆ ಇಲ್ಲ. ಪಾಶ್ಚಿಮಾತ್ಯ ಶಕ್ತಿಗಳನ್ನು ಮನವೊಲಿಸಲು ಅವರು ಇದನ್ನೆಲ್ಲಾ ಮಾಡುತ್ತಿದ್ದಾರೆ’ ಎಂದು ಖಾನ್ ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.