
ಬಾಂಗ್ಲಾದೇಶ ಧ್ವಜ
– ಪಿಟಿಐ ಚಿತ್ರ
ಢಾಕಾ/ನವದೆಹಲಿ: ಸಾರ್ವತ್ರಿಕ ಚುನಾವಣೆಯ ಹೊಸ್ತಿಲಿನಲ್ಲಿರುವ ಬಾಂಗ್ಲಾದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಯುವಂತಹ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ ಎಂದು ಇಲ್ಲಿನ ಬಹುದೊಡ್ಡ ಮುಸ್ಲಿಂ ರಾಜಕೀಯ ಪಕ್ಷವಾದ ಜಮಾತ್–ಎ–ಇಸ್ಲಾಮಿ ದೂರಿದೆ.
ಜತೆಗೆ ಮಧ್ಯಂತರ ಸರ್ಕಾರದ ಕೆಲವು ಮಂದಿ ನಿರ್ದಿಷ್ಟ ರಾಜಕೀಯ ಪಕ್ಷವೊಂದಕ್ಕೆ ಬೆಂಬಲ ನೀಡುತ್ತಾ ಪಕ್ಷಪಾತ ಎಸಗುತ್ತಿದ್ದಾರೆಂದು ಆರೋಪಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಫೆಬ್ರುವರಿ 12ರಂದು ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ, ಢಾಕಾದಲ್ಲಿ ಸೋಮವಾರ ಜಮಾತ್ ಪಕ್ಷದ ಕೇಂದ್ರ ಕಾರ್ಯಕಾರಿ ಮಂಡಳಿಯ ಸಭೆ ನಡೆಸಿ, ರಾಜಕೀಯ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ.
ಈ ವೇಳೆ, ದೇಶದ ವಿವಿಧ ಪ್ರಾಂತ್ಯಗಳಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ನಿರ್ದಿಷ್ಟ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಬಗ್ಗೆ ದೂರು ಸ್ವೀಕರಿಸಲಾಗಿದೆ ಎಂದು ಜಮಾತ್ ಹೇಳಿದೆ. ಚುನಾವಣಾ ಆಯೋಗ ಹಾಗೂ ಕಾನೂನು ಜಾರಿ ಸಂಸ್ಥೆಗಳು ತಟಸ್ಥ ನೀತಿ ಅನ್ವಯ ಕೆಲಸ ಮಾಡಬೇಕು ಎಂದೂ ಕರೆ ನೀಡಿದೆ.
ಜತೆಗೆ ಹಲವೆಡೆ ರಾಜಕೀಯ ನಾಯಕರ ಹತ್ಯೆಗಳು ಮುಂದುವರಿದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅನುವಾಗುವ ರೀತಿ ಕಾನೂನು–ಸುವ್ಯವಸ್ಥೆಯನ್ನು ಸರ್ಕಾರ ಖಾತರಿಪಡಿಸಬೇಕೆಂದೂ ಜಮಾತ್ ಆಗ್ರಹಿಸಿದೆ.