
ಢಾಕಾ/ನವದೆಹಲಿ: ಅವಾಮಿ ಲೀಗ್ನ ಆಣತಿಯಂತೆ ರಾಜಕೀಯ ಪ್ರತೀಕಾರದಿಂದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬಾಂಗ್ಲಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಹಾದಿ ಹತ್ಯೆಗೆ ಸಂಬಂಧಿಸಿದಂತೆ 17 ಜನರ ವಿರುದ್ಧ ದೋಷಾರೋಪ ಹೊರಿಸಲಾಗಿದೆ ಎಂದಿದ್ದಾರೆ.
ಸಾರ್ವಜನಿಕ ಸಭೆಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಹಾದಿ ಅವರು ಇದೀಗ ನಿಷೇಧಕ್ಕೆ ಒಳಗಾಗಿರುವ ಅವಾಮಿ ಲೀಗ್ ಮತ್ತು ಛಾತ್ರಾ ಲೀಗ್ ವಿರುದ್ಧ ಕಟುಟೀಕೆ ಮಾಡಿದ್ದರು.
ಛಾತ್ರಾ ಲೀಗ್ ವಿದ್ಯಾರ್ಥಿ ಘಟಕವು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಸಂಘಟನೆ ಆಗಿದೆ.
ಶರೀಫ್ ಅವರು ಎರಡೂ ಸಂಘಟನೆಗಳ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದುದರಿಂದ, ನಿಷೇಧಿತ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿತ್ತು ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ನ (ಡಿಎಂಪಿ) ಪತ್ತೇದಾರಿ ವಿಭಾಗದ ಹೆಚ್ಚುವರಿ ಆಯುಕ್ತ ಎಂ.ಡಿ. ಶಫಿಕುಲ್ ಇಸ್ಲಾಂ ಹೇಳಿದ್ದಾರೆ ಎಂದು ಟಿಬಿಎಸ್ನ್ಯೂಸ್.ನೆಟ್ ವರದಿ ಮಾಡಿದೆ.
ಹತ್ಯೆಯ ಪ್ರಮುಖ ಆರೋಪಿ ಫೈಸಲ್ ಕರೀಂ ಮಸೂದ್, ಛಾತ್ರಾ ಲೀಗ್ನೊಂದಿಗೆ ನೇರ ಸಂಬಂಧ ಹೊಂದಿದ್ದಾನೆ. ಮತ್ತೊಬ್ಬ ಆರೋಪಿ ತೈಜುಲ್ ಇಸ್ಲಾಂ ಚೌಧರಿ ಬಪ್ಪಿ, ಮಸೂದ್ ಮತ್ತು ಇನ್ನೊಬ್ಬ ಪ್ರಮುಖ ಶಂಕಿತ ಅಲಂಗೀರ್ ಶೇಖ್ಗೆ ಕೊಲೆಯ ನಂತರ ಪರಾರಿ ಆಗಲು ಸಹಾಯ ಮಾಡಿದ್ದಾನೆ ಎಂದು ಅವರು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.