ಬೀಜಿಂಗ್: ಲಡಾಖ್ನ ಗಾಲ್ವನ್ ಕಣಿವೆ ಮೇಲಿನ ಸಾರ್ವಭೌಮತೆಯನ್ನು ಪ್ರತಿಪಾದಿಸಿರುವ ಚೀನಾ, ಆ ಪ್ರದೇಶ ಎಂದಿಗೂ ತನ್ನದು ಎಂದು ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೊ ಲಿಜಿಯಾನ್, ಗಾಲ್ವನ್ ಕಣಿವೆ ವಿಷಯವಾಗಿ ನಾವು ಸೇನೆ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆ ನಡೆಸುತ್ತಿದ್ದೇವೆ. ಘಟನೆ ನಡೆದಿರುವುದು ಚೀನಾಕ್ಕೆ ಸೇರಿದ ಜಾಗದಲ್ಲಿ. ಇದಕ್ಕಾಗಿ ಚೀನಾವನ್ನು ದೂಷಿಸಬೇಕಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಸಂಘರ್ಷದ ವೇಳೆ ಚೀನಾದ 43 ಸೈನಿಕರಿಗೆ ಸಾವು ನೋವು ಸಂಭವಿಸಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. ‘ಗಡಿ ಭದ್ರತಾ ಪಡೆಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಿವೆ’ ಎಂದಷ್ಟೇ ಹೇಳಿದ್ದಾರೆ.
ಎಷ್ಟು ಯೋಧರು ಮೃತಪಟ್ಟಿದ್ದಾರೆ ಎಂದು ಭಾರತತಿಳಿಸಿದೆ. ಆದರೆ ಚೀನಾ ಏಕೆ ಸುಮ್ಮನಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸ್ಥಳೀಯ ಪರಿಸ್ಥಿತಿಯನ್ನು ಎರಡೂ ದೇಶಗಳ ಸೇನೆಗಳು ನಿಭಾಯಿಸುತ್ತಿವೆ. ಈ ಕ್ಷಣದಲ್ಲಿ ನಾನು ಏನನ್ನೂ ಹೇಳಲು ಬಯಸುವುದಿಲ್ಲ’ ಎಂದು ಲಿಜಿಯಾನ್ ಹೇಳಿದರು.
‘ಒಟ್ಟಾರೆಯಾಗಿ ಗಡಿ ಪರಿಸ್ಥಿತಿ ಸ್ಥಿರವಾಗಿದ್ದು, ನಿಯಂತ್ರಣದಲ್ಲಿದೆ. ವಿವಾದ ಬಗೆಹರಿಸಿಕೊಳ್ಳಲು ಎರಡೂ ಕಡೆಯ ಸೇನೆ ಹಾಗೂ ರಾಜತಾಂತ್ರಿಕ ಅಧಿಕಾರಿಗಳು ಸಂವಹನದಲ್ಲಿ ತೊಡಗಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಮುಂದೆ ಇಂತಹ ಸಂಘರ್ಷಗಳನ್ನು ಚೀನಾ ಎದುರು ನೋಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ಧಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.