ಬೀಜಿಂಗ್: ‘ಪೂರ್ವ ಲಡಾಖ್ನ ಸಂಘರ್ಷ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯು ಸಕಾರಾತ್ಮಕವಾಗಿ ನಡೆಯುತ್ತಿದೆ ಎಂಬ ವಿಷಯದ ಬಗ್ಗೆ ಭಾರತೀಯರು ಸಂತೋಷ ಪಡಬೇಕು’ ಎಂದು ಚೀನಾ ಸೇನೆಯು ಹೇಳಿದೆ.
ಉಭಯ ದೇಶಗಳ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸುವ ಸಂಬಂಧ ಭಾರತ ಮತ್ತು ಚೀನಾ ಸೇನೆಗಳ ಕಮಾಂಡರ್ಗಳ ಮಟ್ಟದ 11ನೇ ಸುತ್ತಿನ ಮಾತುಕತೆಯು ಶುಕ್ರವಾರ ನಡೆಯಿತು. ಆದರೆ ಈ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
ಡೆಪ್ಸ್ಯಾಂಗ್, ಗೋಗ್ರಾ ಮತ್ತು ಹಾಟ್ಸ್ಟ್ರಿಂಗ್ಸ್ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಸ್ಥಿರತೆಯನ್ನು ಕಾಪಾಡಲು ಉಭಯ ದೇಶಗಳು ಒಪ್ಪಿಕೊಂಡಿವೆ. ಜತೆಗೆ, ಬಾಕಿ ಇರುವ ವಿವಾದಾತ್ಮಕ ವಿಷಯಗಳನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳಲು ಎರಡೂ ದೇಶಗಳ ಸೇನೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
‘ಚೀನಾದ ನಿಯೋಗದ ಅಧಿಕಾರಿಗಳು ‘ಪೂರ್ವನಿರ್ಧರಿತ ಮನಸ್ಥಿತಿ’ ಯೊಂದಿಗೆ ಮಾತುಕತೆಗೆ ಬಂದಿದ್ದರು. ಹಾಗಾಗಿ ತಮ್ಮ ನಿಲುವುಗಳಲ್ಲಿ ಅವರು ಸಡಿಲಿಕೆ ತೋರಲಿಲ್ಲ’ ಎಂದು ಭಾರತೀಯ ಸೇನೆ ಹೇಳಿದೆ.
‘ಲಡಾಖ್ನ ಗಡಿ ಪ್ರದೇಶಗಳಲ್ಲಿ ಸಂಘರ್ಷ ಕಡಿಮೆಯಾಗುತ್ತಿದೆ. ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಭಾರತವು ಈ ಸಕಾರಾತ್ಮಕ ಬೆಳವಣಿಗೆಯ ಬಗ್ಗೆ ಸಂತೋಷ ವ್ಯಕ್ತಪಡಿಸಬೇಕು. ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಭಾರತ ಕೊನೆವರೆಗೂ ಪಾಲಿಸಬೇಕು’ ಎಂದುಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಹೇಳಿಕೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಚೀನಾದ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್(ಸಿಜಿಟಿಎನ್) ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.