ADVERTISEMENT

ಟರ್ಕಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 28ಕ್ಕೆ ಏರಿಕೆ

ಏಜೆನ್ಸೀಸ್
Published 15 ಅಕ್ಟೋಬರ್ 2022, 5:48 IST
Last Updated 15 ಅಕ್ಟೋಬರ್ 2022, 5:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮಾಸ್ರ (ಟರ್ಕಿ): ಉತ್ತರ ಟರ್ಕಿಯ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕಪ್ಪುಸಮುದ್ರ ಕರಾವಳಿ ಪ್ರದೇಶದಲ್ಲಿನ ಅಮಾಸ್ರ ನಗರದಲ್ಲಿರುವಸರ್ಕಾರಿ ಸ್ವಾಮ್ಯದ ಟಿಟಿಕೆ ಅಮಾಸ್ರ ಮುಸ್ಸೆಸ್ಸೆ ಮುದುರ್ಲುಗು ಗಣಿಯಲ್ಲಿಶುಕ್ರವಾರ ಸಂಜೆ ಸ್ಫೋಟ ಸಂಭವಿಸಿತ್ತು. ದುರಂತ ನಡೆದಾಗ ಗಣಿಯಲ್ಲಿ 110 ಮಂದಿ ಕೆಲಸ ಮಾಡುತ್ತಿದ್ದರು.

ಈ ಬಗ್ಗೆ ಮಾತನಾಡಿರುವ ಇಂಧನ ಸಚಿವ ಫಾತಿಹ್‌ ದುರ್ಮಾಜ್‌, ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಳದಲ್ಲಿ ಸಿಲುಕಿರುವ 15 ಜನರಿಗಾಗಿರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ADVERTISEMENT

ಇದುವರೆಗೆ 28 ಮಂದಿ ಮೃತಪಟ್ಟಿದ್ದಾರೆ. ರಕ್ಷಿಸಲಾಗಿರುವ 11 ಜನರನ್ನು ಬಾರ್ಟಿನ್‌ ಮತ್ತು ಇಸ್ತಾಂಬುಲ್‌ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಆರೋಗ್ಯ ಸಚಿವ ಫಗ್ರೆತ್ತಿನ್‌ ಕೊಕ ಟ್ವೀಟ್ ಮಾಡಿದ್ದಾರೆ.

ಆಂತರಿಕ ಸಚಿವ ಸುಲೇಮಾನ್‌ ಸೋಯ್ಲು ಅವರು 58 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಆ್ಯಂಬುಲೆನ್ಸ್‌ಗಳು ಘಟನಾ ಸ್ಥಳದಲ್ಲಿವೆ. ನೆರೆಯ ಪ್ರಾಂತ್ಯಗಳಿಂದಲೂ ರಕ್ಷಣಾ ತಂಡಗಳನ್ನು ಕಳುಹಿಸಿಕೊಡಲಾಗಿದೆ ಎಂದು ಟರ್ಕಿ ವಿಪತ್ತು ನಿರ್ವಹಣಾ ಪಡೆ 'ಎಎಫ್‌ಎಡಿ' ತಿಳಿಸಿದೆ.

ರಾಷ್ಟ್ರಾಧ್ಯಕ್ಷರು ಇಂದು ಅಮಾಸ್ರಗೆ ಭೇಟಿ ನೀಡುವ ಸಾಧ್ಯತೆ ಇದೆ.

ಟರ್ಕಿಯ ಪಶ್ಚಿಮಕ್ಕಿರುವ ಸೊಮಾ ಪಟ್ಟಣದಲ್ಲಿನ ಕಲ್ಲಿದ್ದಲು ಗಣಿಯೊಂದರಲ್ಲಿ 2014ರಲ್ಲಿ ಸಂಭವಿಸಿದ ಸ್ಫೋಟದಲ್ಲಿ 301 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.