ADVERTISEMENT

ಭಾರತದ ಆರ್ಥಿಕತೆಯ ಸ್ಥಿತಿ ಶೋಚನೀಯ: ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

ಏಜೆನ್ಸೀಸ್
Published 15 ಅಕ್ಟೋಬರ್ 2019, 9:05 IST
Last Updated 15 ಅಕ್ಟೋಬರ್ 2019, 9:05 IST
ಅಭಿಜಿತ್‌ ಬ್ಯಾನರ್ಜಿ (ರಾಯಿಟರ್ಸ್ ಚಿತ್ರ)
ಅಭಿಜಿತ್‌ ಬ್ಯಾನರ್ಜಿ (ರಾಯಿಟರ್ಸ್ ಚಿತ್ರ)   

ವಾಷಿಂಗ್ಟನ್:ಭಾರತದ ಆರ್ಥಿಕತೆಯ ಸ್ಥಿತಿ ಶೋಚನೀಯವಾಗಿದೆ ಎಂದುಅರ್ಥಶಾಸ್ತ್ರದ ನೊಬೆಲ್‌ ಪುರಸ್ಕೃತಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ. ಕುಟುಂಬದ ಉಪಭೋಗದ ಮಾಹಿತಿ ಉಲ್ಲೇಖಿಸಿದ ಅವರು ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದೆ ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಬಡತನ ನಿರ್ಮೂಲನೆ ಮಾಡಲು ತೋರಿಸಿಕೊಟ್ಟ ಪ್ರಾಯೋಗಿಕ ಧೋರಣೆಗಾಗಿ ಇವರು ನೊಬೆಲ್‌ಗೆ ಪಾತ್ರರಾಗಿದ್ದಾರೆ. ಪತ್ನಿಎಸ್ತರ್‌ ಡಫ್ಲೊ ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಜತೆ ಅಭಿಜಿತ್ ಅವರು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅಭಿಜಿತ್ ಭಾರತೀಯ ಆರ್ಥಿಕತೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ನನ್ನ ಪ್ರಕಾರ ಆರ್ಥಿಕತೆಯ ಸ್ಥಿತಿ ಶೋಚನೀಯವಾಗಿದೆ’ ಎಂದು ಹೇಳಿದ್ದಾರೆ. 2014–15 ಮತ್ತು 2017–18ನೇ ಸಾಲಿನ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಸರಾಸರಿಗೃಹ ಬಳಕೆ ವಸ್ತುಗಳ ಖರೀದಿಗೆ ಸಂಬಂಧಿಸಿದ ಎನ್‌ಎಸ್ಎಸ್ (ನ್ಯಾಷನಲ್‌ ಸ್ಯಾಂಪಲ್‌ ಸರ್ವೆ) ದತ್ತಾಂಶ ಉಲ್ಲೇಖಿಸಿದ ಅವರು, ಬಹಳ ವರ್ಷಗಳ ಬಳಿಕ ಈ ರೀತಿಯಾಗುತ್ತಿದೆ. ಇದು ಎಚ್ಚರಿಕೆಯ ಸಂಕೇತಎಂದೂ ಹೇಳಿದ್ದಾರೆ.

ಆರ್ಥಿಕತೆ ಕುರಿತು ಭಾರತದಲ್ಲಿ ನಡೆಯುವ ಚರ್ಚೆಗಳ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಯಾವ ದತ್ತಾಂಶ ಮತ್ತು ಅಂಕಿಅಂಶಗಳನ್ನು ಆರ್ಥಿಕತೆಯ ಆರೋಗ್ಯದ ಸೂಚಕ ಅಥವಾ ಸಂಕೇತಗಳೆಂದು ಪರಿಗಣಿಸಬೇಕೋ ಅವುಗಳನ್ನು ತಮಗೆ ವಿರುದ್ಧವಾಗಿವೆ ಎಂಬ ಕಾರಣಕ್ಕಾಗಿ ಸರ್ಕಾರ ತಪ್ಪು ಎಂದು ಪರಿಗಣಿಸಿದ್ದನ್ನು ಟೀಕಿಸಿದ್ದಾರೆ.

ಆರ್ಥಿಕ ಹಿಂಜರಿತದ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದೂ ಅಭಿಜಿತ್ ಹೇಳಿದ್ದಾರೆ. ಆದರೆ, ಈ ಸಮಸ್ಯೆಯ ನಿವಾರಣೆಗೆ ಏನು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲು ಅವರು ನಿರಾಕರಿಸಿದ್ದಾರೆ ಎಂದುಹಿಂದೂಸ್ತಾನ್ ಟೈಮ್ಸ್ವರದಿ ಮಾಡಿದೆ. ಸರ್ಕಾರವು ಎಲ್ಲರನ್ನೂ ಮೆಚ್ಚಿಸುವ ಉದ್ದೇಶ ಹೊಂದಿರುವುದು ನಿಜ. ಆದರೆ, ಕೆಲವು ಬಜೆಟ್ ಗುರಿಗಳು ಮತ್ತು ವಿತ್ತೀಯ ಗುರಿಗಳನ್ನು ಸಾಧಿಸುತ್ತಿರುವಂತೆ ಬಿಂಬಿಸುತ್ತಿದೆಯಷ್ಟೆ ಎಂದು ಅವರು ಹೇಳಿದ್ದಾರೆ.

ಬಂಗಾಳಿ ಸುದ್ದಿವಾಹಿನಿಯೊಂದರ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿತ್ತೀಯ ಸ್ಥಿರತೆ ಬಗ್ಗೆ ನೀವು ಹೆಚ್ಚು ಚಿಂತಿಸಬೇಡಿ. ಬೇಡಿಕೆ ಬಗ್ಗೆ ಯೋಚಿಸಿ. ಸದ್ಯ ಬೇಡಿಕೆ ಕುಸಿತವೇ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದು ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.